ಮಂಡ್ಯ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 8 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಇದಕ್ಕೆ ಚಾಲನೆ ನೀಡಲಿದ್ದಾರೆ.
ಈ ಬಾರಿ ಪ್ರದರ್ಶನ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ. ಮಹಾತ್ಮ ಗಾಂಧಿ ತತ್ವ ಸಿದ್ಧಾಂತಗಳ ಕುರಿತು ಅರಿವು ಮೂಡಿಸುವ ಪುಷ್ಪ ಪ್ರದರ್ಶನ, ಕೆಆರ್ಎಸ್ ಮಾದರಿ, ಮೈಸೂರು ಸಂಸ್ಥಾನದ ದರ್ಬಾರ್, ಶ್ರೀರಂಗನಾಥ ದಿವ್ಯದರ್ಶನ ಸೇರಿದಂತೆ ಹೂವಿನ ಹಲವು ಪ್ರತಿಕೃತಿಗಳು ಗಮನ ಸೆಳೆಯಲಿವೆ. ಜೊತೆಗೆ ಆಹಾರ ಮೇಳವೂ ನಡೆಯಲಿದೆ.
ಮಕ್ಕಳು ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಮಂಗಳಯಾನ, ಚಂದ್ರಯಾನದ ಉಪಗ್ರಹದ ಮಾದರಿ ಇರಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ವಯಸ್ಕರಿಗೆ ₹25 ಪ್ರವೇಶ ದರ ನಿಗದಿಪಡಿಸಲಾಗಿದೆ. ಸಾವಯವ ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾವಯವ ಸಂತನನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 8 ದಿನಗಳ ಕಾಲ ನಡೆಯಲಿವೆ.