ಮಂಡ್ಯ: ಜಿಲ್ಲೆಗೆ ಐಸಿಯು ಬೆಡ್ ಹಾಗೂ ಆಕ್ಸಿಜನ್ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವಂತೆ ಒತ್ತಾಯ ಇದೆ. ಹೀಗಾಗಿ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಡಿಸಿಎಂ ಅಶ್ವತ್ ನಾರಾಯಣ ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ತಾಲೂಕು ಆಸ್ಪತ್ರೆ ಹಾಗೂ ಪಿಹೆಚ್ಸಿಗಳಲ್ಲಿ ಐಸಿಯು ಆಕ್ಸಿಜನ್ ವ್ಯವಸ್ಥೆಗೆ ಇದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಶೇ.18 ಕ್ಕಿಂತ ಹೆಚ್ಚು ಟೆಸ್ಟಿಂಗ್ ನಡೆಯುತ್ತಿದೆ. ಪ್ರತಿ ಮನೆಗಳಿಗೆ ಸಿಬ್ಬಂದಿ ತೆರಳಿ ರೋಗಲಕ್ಷಣಗಳಿರುವವರ ಪತ್ತೆ ಹಚ್ಚಬೇಕು. ಹೀಗಾಗಿ ಟೆಸ್ಟಿಂಗ್ ರೇಟ್ ಜಾಸ್ತಿ ಮಾಡಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ವ್ಯಾಕ್ಸಿನ್ ಕೊರತೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡುವ ಕೆಲಸ ನಡೆಯುತ್ತಿದೆ. ಎರಡನೇ ಡೋಸ್ಗೆ ಯಾವುದೇ ರೀತಿ ಸಮಸ್ಯೆಯಾಗದ ರೀತಿ ನಿರ್ವಹಣೆಯಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಎಲ್ಲರಿಗೂ ಒಂದು ಡೋಸ್ ಕೊಡುವ ಉದ್ದೇಶ ಇದೆ ಎಂದರು.
ಮಂಡ್ಯದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿರುವುದರಲ್ಲಿ ಎರಡೂ ನೆಗೆಟಿವ್ ಇದೆ. ಯಾರಿಗೆ ಬ್ಲಾಕ್ ಫಂಗಸ್ ಇದೆ ಅವರಿಗೆ ಔಷಧಿ ಅವಶ್ಯಕತೆ ಇದೆ. ಆದ್ರೆ ನಮ್ಮಲ್ಲೂ ಕೊರತೆ ಇದೆ, ಕೊರತೆ ನಿಭಾಯಿಸಲು ನಮ್ಮ ದೇಶದಲ್ಲೇ ಹ್ಯಾಂಫೋಟೆರಿಷನ್ ತಯಾರಾಗುವಂತ ಕೆಲಸವಾಗುತ್ತೆ. ಆದ್ರೆ ಸದ್ಯಕ್ಕೆ ಬೇರೆ ದೇಶದಿಂದ ತರಿಕೊಳ್ಳುವ ಕೆಲಸ ನಡೆಯುತ್ತಿದೆ. ಯಾರಿಗೆ ಅವಶ್ಯಕತೆ ಇದೆ ಅವರಿಗೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡ್ತಿದೆ ಎಂದು ತಿಳಿಸಿದರು.
ಡಿಸಿಗಳ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೋ ಸಂವಾದ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಸರ್ಕಾರ ಉತ್ತರ ಕೊಟ್ಟಿದೆ. ಬಳಹ ಸ್ಪಷ್ಟವಾಗಿ ಅವಕಾಶ ಇಲ್ಲವೆಂದು ಹೇಳಿದೆ. ರಾಜ್ಯದಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಇಲ್ಲಾ ಎಂದು ಮಾಜಿ ಸಿಎಂಗೆ ತಿರುಗೇಟು ನೀಡಿದರು.
ಇದಕ್ಕೂ ಮುನ್ನ ಮಂಡ್ಯದ ಮಿಮ್ಸ್ನಲ್ಲಿರುವ ಕೋವಿಡ್ ವಾರ್ಡ್ಗೆ ಡಿಸಿಎಂ ಅಶ್ವತ್ ನಾರಾಯಣ್ ಭೇಟಿ ನೀಡಿ ಸೋಂಕಿತರನ್ನ ವಿಚಾರಿಸಿದರು.
ಇಂದು ಆಸ್ಪತ್ರೆಗೆ ಆಗಮಿಸಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್, ವೈದ್ಯರು ಸರಿಯಾಗಿ ನೋಡಿಕೊಳ್ತಿದ್ದಾರಾ? ಆಕ್ಸಿಜನ್ ಸಿಗ್ತಿದ್ಯಾ..? ಊಟದ ವ್ಯವಸ್ಥೆ ಹೇಗಿದೆ..? ಎಂದು ಸೋಂಕಿತರನ್ನ ವಿಚಾರಿಸಿದರು.
ಈ ವೇಳೆ, ಸಚಿವ ನಾರಾಯಣಗೌಡ, ಮಿಮ್ಸ್ ಅಧಿಕಾರಿಗಳ ಅಹವಾಲು ಸ್ವೀಕರಿಸಿದ ಅವರು, ಸೋಂಕಿತರ ಆರೋಗ್ಯ ವಿಚಾರಿಸಿ ಅವರಿಗೆ ಚಿಕಿತ್ಸೆ ವಿಚಾರದಲ್ಲಿ ಸಮಸ್ಯೆಗಳಿದ್ದಲ್ಲಿ ಸರಿ ಪಡಿಸುವಂತೆ ಸೂಚನೆ ನೀಡಿದರು.