ಕುಷ್ಟಗಿ (ಕೊಪ್ಪಳ): ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ತನ್ನ ಎರಡು ಕಾಲುಗಳಿಗೆ ಆದ ಗಾಯಕ್ಕೆ ಹುಳು ಬಿದ್ದು ನರಕಯಾತನೆ ಅನುಭವಿಸುತ್ತಿದ್ದ ವಯೋವೃದ್ಧೆಯೊಬ್ಬಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಪ್ರಸಂಗ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಿರೇಮನ್ನಾಪೂರ ಮೂಲದ ಯಲ್ಲವ್ವ ವಯೋವೃದ್ಧೆಗೆ ಕಾಲಿನ ಗಾಯಕ್ಕೆ ಆಸ್ಪತ್ರೆಯ ಸಿಬ್ಬಂದಿ ಹುಳು ತೆಗೆದು, ಚಿಕಿತ್ಸೆ ನೀಡಿದ್ದರು. ಆದಾಗ್ಯೂ ವಯೋವೃದ್ಧೆ ನೋವಿನ ಬಾಧೆ ತಾಳದೇ ಚಡಪಡಿಸಿ ವಿಕಾರವಾಗಿ ಚೀರಾಡುತ್ತಿದ್ದಳು. ವೃದ್ಧೆ ನರಕಯಾತನೆ ಅನುಭವಿಸುತ್ತಿರುವುದನ್ನು ಸ್ಥಳೀಯರಾದ ರವಿಚಂದ್ರ ತಾಳದ್ ಗಮನಿಸಿದ್ದರು.

ನನಗ್ಯಾರು ಇಲ್ಲ, 50 ರೂ. ಕೊಡುವೆ ಸ್ನಾನ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಸಹನೀಯ ನೋವು ತೋಡಿಕೊಂಡಿದ್ದಳು. ವೃದ್ಧೆಯ ತೊಳಲಾಟ ಗಮನಿಸಿದ ರವಿಚಂದ್ರ ತಾಳದ್ ಅವರು, ಕೂಡಲೇ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಮೇಘಾ ದೇಸಾಯಿ, ಡಾ. ಕುಮುದಾ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅವರು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರವಿಚಂದ್ರ ತಾಳದ್, ಅಜ್ಜಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಳು. ಹಿರೇಮನ್ನಾಪೂರಕ್ಕೆ ಕಳುಹಿಸುವುದಾಗಿ ಹೇಳಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.