ಕುಷ್ಟಗಿ(ಕೊಪ್ಪಳ): ಸೊಳ್ಳೆಗಳ ಉತ್ಪತ್ತಿಯಿಂದ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ರೋಗ ಬರುವುದನ್ನು ತಡೆಯಲು ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ಹೇಳಿದ್ದಾರೆ.
ಇಲ್ಲಿನ ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಡೆದ ಡೆಂಘೀ ದಿನಾಚರಣೆ ಕಾರ್ಯಕ್ರಮದಲ್ಲಿ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸದ್ಯಕ್ಕೆ ಎಲ್ಲೆಡೆ ಕೊರೊನಾ ವೈರಸ್ ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ಈ ಕಾಯಿಲೆಗಳನ್ನು ಎದುರಿಸಬೇಕಿದೆ. ಈಗ ಮಳೆಗಾಲವಾಗಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಡೆ ನೀರು ನಿಲ್ಲುವ ಮೂಲಕ ಈ ರೀತಿಯ ಕಾಯಿಲೆ ಬರುತ್ತಿವೆ. ಅಲ್ಲಲ್ಲಿ ನೀರು ನಿಂತಿರುವುದು ನಿಮ್ಮ ಗಮನಕ್ಕೆ ಬಂದರೆ ತೆರವುಗೊಳಿಸಿ ಕಾಯಿಲೆ ಬರದಂತೆ ತಡೆಯಬೇಕಿದೆ ಎಂದು ಮನವಿ ಮಾಡಿದರು.
ಈ ವೇಳೆ ಹಿರಿಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಪ್ರಕಾಶ ಗುತ್ತೇದಾರ, ಪ್ರಕಾಶಗೌಡ ಬೆದವಟ್ಟಿ, ಬಾಬು ನಾಯಕ್, ಬಾಲಾಜಿ, ಪ್ರಸನ್ನ ಹಾಗೂ ಇನ್ನಿತರರು ಹಾಜರಿದ್ದರು.