ಕುಷ್ಟಗಿ (ಕೊಪ್ಪಳ) : ಭರ್ಜರಿ ಫಸಲಿನ ಜಾಹೀರಾತಿಗೆ ಮಾರು ಹೋದ ತಾಲೂಕಿನ ಕಡೇಕೊಪ್ಪದ ರೈತರು ಖಾಸಗಿ ಕಂಪನಿಯಿಂದ ಬೀಜ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ರೈತರು ದೋಟಿಹಾಳದ ಖಾಸಗಿ ಬೀಜೋತ್ಪಾದನೆ ಕಂಪನಿಯಿಂದ ಸಜ್ಜೆ ಬೀಜ ಖರೀದಿಸಿ ಕಳೆದ 20 ದಿನಗಳ ಹಿಂದೆ ಬಿತ್ತನೆ ಮಾಡಿದ್ದರು. ಇಷ್ಟೊತ್ತಿಗೆ ಬಿತ್ತಿದ ಬೀಜ ಮೊಳಕೆಯೊಡೆದು ಹಸಿರು ಪೈರು ಕಾಣಿಸಬೇಕಿತ್ತು. ಆದರೆ, ಬಿತ್ತನೆ ಮಾಡಿದ ಜಮೀನಿನಲ್ಲಿ ಮೊಳಕೆಯೊಡೆದ ಬೆಳೆಯ ಲವಲೇಶದ ಅಂಶವು ಕಾಣದಿರುವುದು ರೈತರನ್ನು ಕಂಗೆಡಿಸಿದೆ. ಈ ಬಗ್ಗೆ ಬೀಜ ಖರೀದಿಸಿದ ಕಂಪನಿಯವರನ್ನು ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಬೀಜ ಖರೀಸಿದ ಕಂಪನಿ ವಿರುದ್ದ ದೂರು ನೀಡೋಣವೆಂದರೆ ಬೀಜ ಖರೀಸಿದ ರಶೀದಿಯೂ ರೈತರ ಬಳಿಯಿಲ್ಲ. ಹೀಗಾಗಿ, ಅತ್ತ ಬಿತ್ತಿದ ಬೀಜ ಮೊಳಕೆಯೊಡೆಯದೆ ಇತ್ತ ದೂರು ನೀಡಲಾಗದೆ ರೈತರಿಗೆ ದಾರಿಯೇ ತೋಚದಂತಾಗಿದೆ.
ಈ ಬಗ್ಗೆ ರೈತ ಸಂತೋಷ ಪಾಟೀಲ ಮಾತನಾಡಿ, ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಸೇರಿ ಎಕರೆಗೆ ಸುಮಾರು 10 ಸಾವಿರ ರೂ. ಖರ್ಚಾಗಿದೆ. ಹಲವು ರೈತರು ಇದೇ ರೀತಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಬಿತ್ತನೆ ಮಾಡಿದ್ದಾರೆ. ಉತ್ತಮ ಮಳೆಯಾದ ಸಂದರ್ಭ ರೈತ ಸಂಪರ್ಕ ಕೇಂದ್ರದಲ್ಲಿ ಸಜ್ಜೆ ಬಿತ್ತನೆ ಬೀಜ ಬಂದಿರಲಿಲ್ಲ. ಹೀಗಾಗಿ ಖಾಸಗಿ ಕಂಪನಿ ಬಿತ್ತನೆ ಬೀಜ ಖರೀದಿಸಿದೆವು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ್, ನಮಗೆ ದೂರು ಬಂದಿಲ್ಲ, ದೂರು ಬಂದರೆ ಪರಿಗಣಿಸಿ ಖುದ್ದಾಗಿ ಜಮೀನಿಗೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.