ಗಂಗಾವತಿ (ಕೊಪ್ಪಳ) : ಮಾಧ್ವ ಪಂಥದ ಅನುಯಾಯಿಗಳ ಪ್ರಮುಖ ಧಾರ್ಮಿಕ ತಾಣ ಮತ್ತು ಶ್ರದ್ಧಾ ಕೇಂದ್ರವಾದ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸುವ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಉತ್ತರಾಧಿಮಠ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಧ್ಯ ಉದ್ಭವಿಸಿರುವ ಪೂಜೆ ವಿವಾದವನ್ನು ಬಗೆಹರಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿದೆ.
ತಹಶೀಲ್ದಾರ್ ಮಂಜುನಾಥ ಹಿರೇಮಠ ಅವರು ಮಂಗಳವಾರ ಸಂಜೆ ಐದು ಗಂಟೆಗೆ ಎರಡೂ ಮಠಗಳ ಅನುಯಾಯಿಗಳ ಸಭೆಯನ್ನು ತಹಸೀಲ್ದಾರ್ ಕಚೇರಿಯಲ್ಲಿ ಕರೆದಿದ್ದಾರೆ. ಇಬ್ಬರ ನಡುವಿನ ಉಂಟಾಗಿರುವ ಪೂಜಾ ವಿವಾದವನ್ನು ಬಗೆಹರಿಸಲು ಮುಂದಾಗಿದ್ದಾರೆ.
ಏನಿದು ಪೂಜಾ ವಿವಾದ? : ಜೂನ್ 6ರಿಂದ 8 ರವರೆಗೆ ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲು ಅವಕಾಶ ಕೋರಿ ಮಂತ್ರಾಲಯದ ಮಠದಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದೇ ಸಮಯಕ್ಕೆ ಅಂದರೆ ಜೂನ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ರಘುವರ್ಯ ತೀರ್ಥರ ಮಹಿಮೋತ್ಸವ ಆಚರಣೆಗೆ ಅವಕಾಶ ಕೋರಿ ಉತ್ತರಾಧಿ ಮಠದಿಂದಲೂ ತಹಸೀಲ್ದಾರ್ ಬೇಡಿಕೆ ಸಲ್ಲಿಸಲಾಗಿದೆ.
ಈಗಾಗಲೇ ಈ ಎರಡೂ ಮಠಗಳ ಮಧ್ಯೆ, ನವವೃಂದಾವನದಲ್ಲಿ ಪೂಜೆಯ ವಾರಸತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಹೈಕೋರ್ಟ್ನಲ್ಲಿದೆ. ಇದರ ಮಧ್ಯೆ ವೃಂದಾವನಸ್ಥರಾಗಿರುವ ಯತಿಗಳ ಆರಾಧನೆಗೆ ಅವಕಾಶ ಕೋರಿ ಉಭಯ ಮಠಗಳು ಬೇಡಿಕೆ ಇಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
ಇದನ್ನೂ ಓದಿ : ನವವೃಂದಾವನ ಗಡ್ಡೆ: ಉತ್ತರಾಧಿ ಮಠಕ್ಕೆ ಆರಾಧನೆಗೆ ಹೈಕೋರ್ಟ್ ಅಸ್ತು