ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದ ಬೆಟ್ಟವೊಂದರ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ.
ರಸ್ತೆ ಪಕ್ಕದಲ್ಲಿರುವ ಈ ಗುಡ್ಡದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ದೂರದಿಂದಲೇ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ವೇಳೆ ಚಿರತೆಯೊಂದು ತಮ್ಮೂರ ಗುಡ್ಡದಲ್ಲಿ ಪ್ರತ್ಯಕ್ಷವಾಗಿರೋದು ಕರಡಿಗುಡ್ಡ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಗ್ರಾಮದ ಅನೇಕರು ಈ ಗುಡ್ಡದ ಮಾರ್ಗದಿಂದಲೇ ತಮ್ಮ ಹೊಲಗಳಿಗೆ ಹೋಗಬೇಕು. ಈಗ ಚಿರತೆ ಪ್ರತ್ಯಕ್ಷವಾಗಿರುವುದು ಹೊಲಗಳಿಗೆ ಹೋಗಲು ಹಾಗೂ ಈ ಭಾಗದಲ್ಲಿ ಜನ ಓಡಾಡುವುದಕ್ಕೆ ಭಯ ಮೂಡಿಸಿದೆ. ಹೀಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.