ಕುಷ್ಟಗಿ(ಕೊಪ್ಪಳ): ತಾಲೂಕಿನ ಬೀಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ಮಂಜೂರಾತಿ ಹುದ್ದೆಗಳ ಅನುಗುಣವಾಗಿ 7 ಶಿಕ್ಷಕರ ಅಗತ್ಯವಿರುವ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರೇ ಕಾಯಂ ಶಿಕ್ಷಕರಿದ್ದರು. ಇವರಲ್ಲಿ ಓರ್ವ ಶಿಕ್ಷಕ ಅಕಾಲಿಕ ನಿಧನರಾಗಿದ್ದಾರೆ. ಹೀಗಾಗಿ ಎಲ್ಲ ಹೊಣೆಗಾರಿಕೆ ಮುಖ್ಯ ಶಿಕ್ಷಕರ ಹೆಗಲಿಗೆ ಬಿದ್ದಿದೆ. ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದ್ದರೂ ಶಾಲೆಗೆ ಕಾಯಂ ಶಿಕ್ಷಕರು ಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಗ್ರಾಮಸ್ಥರ ಬೇಡಿಕೆಗೆ ಶಿಕ್ಷಣ ಇಲಾಖೆ ಸಕಾಲಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರನ್ನ ನಿಯೋಜಿಸಿಕೊಳ್ಳಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಶಾಲೆಯಲ್ಲಿ ಕಲಿಕೆಯಲ್ಲಿ ಇರಬೇಕಾದ ಮಕ್ಕಳು ಪಕ್ಕದ ಮನ್ನೇರಾಳ ಶಾಲೆಯನ್ನು ನೆಚ್ಚಿಕೊಂಡಿದ್ದಾರೆ. ಇನ್ನು ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ಸ್ಥಳೀಯ ಮಕ್ಕಳು ಹನುಮಸಾಗರ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರಿಂದ ಮಕ್ಕಳ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ.
ಬೀಳಗಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಗೆ ದಾಖಲಾತಿ ಇರುವ ಒಟ್ಟು ಮಕ್ಕಳ ಸಂಖ್ಯೆ 94.1ನೇ ತರಗತಿಯಲ್ಲಿ 17, 2ನೇ ತರಗತಿಯಲ್ಲಿ 16, 3ನೇ ತರಗತಿಯಲ್ಲಿ 15, 4ನೇ ತರಗತಿಯಲ್ಲಿ 10, 5ನೇ ತರಗತಿಯಲ್ಲಿ 14 ಮಕ್ಕಳ ದಾಖಲಾತಿ ಇದೆ. ಕೊರೊನಾ ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿ ಶಾಲೆ ಶುರುವಾಗಿಲ್ಲ. ಸದ್ಯ 6ನೇ ತರಗತಿಯಲ್ಲಿ 13 ಹಾಗೂ 7ನೇ ತರಗತಿಯಲ್ಲಿ 9 ವಿದ್ಯಾರ್ಥಿಗಳ ಸಂಖ್ಯೆ ಇದೆ.
ಓದಿ : ಬೆಂಗಳೂರಿನ ಎಂಎಸ್ ಪಾಳ್ಯದ ಮನೆ ಮಂದಿಗೆ ಕೋವಿಡ್ ದೃಢ.. ಮೂರು ಕೋವಿಡ್ ಕ್ಲಸ್ಟರ್ ಘೋಷಣೆ
ಮುಖ್ಯ ಶಿಕ್ಷಕರಾಗಿ ಭೀಮಣ್ಣ ಭಜಂತ್ರಿ ಕಾರ್ಯನಿರ್ವಹಿಸುತ್ತಿದ್ದು, ಕಾಯಂ ಶಿಕ್ಷಕರ ಬೇಡಿಕೆಗೆ ಸದ್ಯ ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಾಗಿ ಯತ್ನಿಸಲಾಗಿದೆ. ಮಾ.20 ರಂದು ಸದರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಇದೇ ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಈ ವೇಳೆ ಗ್ರಾಮಸ್ಥರ ವಿರೋಧ ಎದುರಿಸುವ ಸಾಧ್ಯತೆ ಇದೆ. ಆ ಸಂಧರ್ಭದಲ್ಲಿ ಗ್ರಾಮಸ್ಥರ ವಿರೋಧ ತಪ್ಪಿಸಿಕೊಳ್ಳಲು ಮತ್ತೊಬ್ಬ ಶಿಕ್ಷಕರನ್ನ ಕಬ್ಬರಗಿ ಶಾಲೆಯಿಂದ ವಾರದಲ್ಲಿ ಮೂರು ದಿನಗಳ ಮಟ್ಟಿಗೆ ನಿಯೋಜಿಸಿಕೊಳ್ಳಲಾಗಿದೆ. ಸದ್ಯ ಮುಖ್ಯ ಶಿಕ್ಷಕ ಸೇರಿದಂತೆ 3 ಜನ ಪಕ್ಕದ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ.
ಹಕ್ಕು ಪತ್ರ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ:
ಅಲ್ಲದೆ, ಬೀಳಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ವೇಳೆ ಎರಡು ದಶಕಗಳ ನಿವೇಶನ ಹಕ್ಕು ಪತ್ರ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಗ್ರಾಮಸ್ಥರಲ್ಲಿದೆ. ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀಳಗಿ ಗ್ರಾಮದ ಹೊರವಲಯದ ಮಹಾಂತಮ್ಮ ಪವಾಡೆಪ್ಪ ಮಾಲೀಕತ್ವದ ಸ.ನಂ.1 ಹಿಸ್ಸಾ 5, ರ 21 ಗುಂಟೆ ಜಮೀನು 2001-02ರಲ್ಲಿ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು. ಇದರಲ್ಲಿ 18 ಕುಟುಂಬಗಳು ಮನೆ ನಿರ್ಮಿಸಿಕೊಂಡಿದ್ದು, ಸದರಿ ಜಮೀನು ರಾಜ್ಯಪಾಲರ ಹೆಸರಿನಲ್ಲಿದೆ. ಈ ನಿವಾಸಿಗರು ನಿವೇಶನ ಹಕ್ಕುಪತ್ರಗಳಿಂದ ವಂಚಿತರಾಗಿದ್ದಾರೆ.
ಈ ಮನೆಗಳಿಗೆ ಹಕ್ಕುಪತ್ರಗಳಿಲ್ಲ ಎಂನ ಕೊರಗು ಹಾಗೆಯೇ ಇದ್ದು, ಬ್ಯಾಂಕ್ ಸೌಲಭ್ಯಗಳಿಗೆ, ಆಸ್ತಿ ಮೇಲಿನ ಸಾಲ ಇತ್ಯಾದಿ ಸೌಲಭ್ಯಗಳಿಗೆ ಹಕ್ಕು ಪತ್ರ ಅವಶ್ಯಕವಾಗಿದೆ. ಈ ಸಮಸ್ಯೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸಮಸ್ಯೆ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇತ್ಯಾರ್ಥಗೊಳ್ಳುವ ಎಲ್ಲಾ ಲಕ್ಷಣಗಳಿವೆ ಎಂದು ಕಬ್ಬರಗಿ ಪಿಡಿಒ ಬಸವರಾಜ್ ಸಂಕನಾಳ ತಿಳಿಸಿದ್ದಾರೆ.