ಗಂಗಾವತಿ/ಕೊಪ್ಪಳ: ಮೈಸೂರು ದಸರಾದ ಜಂಬೂ ಸವಾರಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಮೊದಲ ಜಂಬೂ ಸವಾರಿ ಎಂದು ಪರಿಗಣಿಸಲ್ಪಡುವ ಹೇಮಗುಡ್ಡದಲ್ಲಿ ಇಂದು ಅದ್ಧೂರಿಯಾಗಿ ಜಂಬೂ ಸವಾರಿ ನಡೆಯಿತು.
ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಶರನ್ನವರಾತ್ರೋತ್ಸವದ ಅಂಗವಾಗಿ ಕಳೆದ ಎಂಟು ದಿನಗಳಿಂದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಗೋಧೂಳಿ ಸಮಯದಲ್ಲಿ ದೇಗುಲದ ಆವರಣದಲ್ಲಿ ಮಾಜಿ ಸಂಸದ ಹೆಚ್.ಜಿ.ರಾಮುಲು, ದೇವಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಪಲ್ಲಕ್ಕಿ ಹೊತ್ತ ಆನೆಗೆ ಪೂಜೆ ಸಲ್ಲಿಸಿ ಹಣ್ಣುಕಾಯಿ ನೀಡಿದ ಬಳಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಸಿಕ್ತು. ಪರಮೇಶ್ವರಿಯ ಪಲ್ಲಕ್ಕಿಯನ್ನು ಹೊತ್ತ ಆನೆ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿತು.
ದೇಗುಲದಿಂದ ಆರಂಭವಾದ ಮೆರವಣಿಗೆ ಹೇಮಗುಡ್ಡದ ಆಂಜನೇಯ ದೇವಸ್ಥಾನದ ಪಾದಗಟ್ಟೆಯವರೆಗೂ ತೆರಳಿ ಪುನಃ ಪರಮೇಶ್ವರಿ ದೇಗುಲಕ್ಕೆ ಆಗಮಿಸಿತು. ಮಾಜಿ ಸಂಸದ ಹೆಚ್.ಜಿ.ರಾಮುಲು ಪುತ್ರ ಹೆಚ್.ಆರ್.ಶ್ರೀನಾಥ್ ಅವರ ನೇತೃತ್ವದಲ್ಲಿ ಕಳೆದ 35 ವರ್ಷದಿಂದ ಹೇಮಗುಡ್ಡದಲ್ಲಿ ಜಂಬೂ ಸವಾರಿ ನಡೆಯುತ್ತಿದೆ.