ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಹೊರವಲಯದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕಳಪೆ ಆಹಾರಕ್ಕೆ ಬೇಸತ್ತ ವಿದ್ಯಾರ್ಥಿಗಳು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ ವಸತಿ ನಿಲಯದಲ್ಲಿ ಅವಲಕ್ಕಿ ಒಗ್ಗರಣೆ ಉಪಹಾರ ಸರಿಯಾಗಿಲ್ಲ ಎಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು, ಉಪಹಾರದ ಪಾತ್ರೆಯೊಂದಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಇಲಾಖಾ ಅಧಿಕಾರಿ ವೀರಪ್ಪ ಛತ್ರದ್ ಅವರಿಗೆ ಕಳಪೆ ಅಹಾರ ತೋರಿಸಿ ಈ ಆಹಾರ ಸೇವಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಈ ವೇಳೆ ಆಗಮಿಸಿದ ಪಿಎಸ್ಐ ತಿಮ್ಮಣ್ಣ ನಾಯಕ, ವಿದ್ಯಾರ್ಥಿಗಳ ಮನವೊಲಿಸಿ ಪುನಃ ವಸತಿ ನಿಲಯಕ್ಕೆ ಕಳುಹಿಸಿದರು. ನಂತರ ಅಡುಗೆಯವರಿಗೆ, ನಿಲಯ ಮೇಲ್ವಿಚಾರಕರಿಗೆ ತರಾಟೆ ತೆಗೆದುಕೊಂಡ ಅವರು, ಗುಣಮಟ್ಟದ ಆಹಾರ ತಯಾರಿಸಿ ದೂರು ಬರದಂತೆ ನಿಗಾವಹಿಸಿ ಎಂದು ತಾಕೀತು ಮಾಡಿ, ಅಲ್ಲಿಯೇ ಇಲಾಖಾ ಅಧಿಕಾರಿ ವೀರಪ್ಪ ಛತ್ರದ್ ಅವರೊಂದಿಗೆ ಉಪಹಾರ ಸೇವಿಸಿದರು.
ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ನೊಂದ ವಿದ್ಯಾರ್ಥಿಗಳು, ಗುಣಮಟ್ಟದ ಆಹಾರ ತಯಾರಿಸುವಂತೆ ಹೇಳಿದರೆ, ನಮ್ಮನ್ನೇ ಟಾರ್ಗೆಟ್ ಮಾಡುತ್ತಾರೆ. ಧಾನ್ಯವನ್ನು ಸ್ವಚ್ಛಗೊಳಿಸಿ ಬಳಸುತ್ತಿರಲಿಲ್ಲ. ಅರೆ ಬೆಂದ ಆಹಾರ ತಯಾರಿಸಿ ಹಾಕಿದರೂ ಸುಮ್ಮನೇ ಅದನ್ನೇ ತಿನ್ನಬೇಕಿತ್ತು. ತಿನ್ನುವ ಪದಾರ್ಥದಲ್ಲಿ ನುಸಿ ಹುಳುಗಳ ಬಗ್ಗೆ ಪ್ರಸ್ತಾಪಿಸಿದರೆ ಸೈಡಿಗೆ ಸರಿಸಿ ತಿನ್ನಿ ಅಂತಾರೆ ಎಂದಿದ್ದಾರೆ.
ಓದಿ: ರಾಜ್ಯದಲ್ಲೂ ಹೆಚ್ಚಾಯ್ತು ಕೊರೊನಾ: ಶನಿವಾರದಿಂದಲೇ ಕೆಲವೊಂದು ಜಿಲ್ಲೆಗಳಲ್ಲಿ 'ಕೊರೊನಾ ಕರ್ಫ್ಯೂ' ಜಾರಿ