ಕೊಪ್ಪಳ: ನಾವು ಅಧುನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ನಮ್ಮಲ್ಲಿನ ಮೂಢನಂಬಿಕೆಗಳನ್ನು ಜೀವಂತವಾಗಿಡಲಾಗುತ್ತಿದೆ. ಅನೇಕ ಅನಿಷ್ಠ ಪದ್ಧತಿಗಳಿಂದ ಜನರು ಇನ್ನೂ ಹೊರಬಂದಿಲ್ಲ ಅನ್ನೋದಕ್ಕೆ ಜಿಲ್ಲೆಯಲ್ಲಿ ಸದ್ದಿಲ್ಲದೆ ಆಚರಣೆಯಲ್ಲಿರುವ ಈ ಪದ್ಧತಿ ಉದಾಹರಣೆಯಾಗಿದೆ.
ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಸಜ್ಜಿಹೊಲ ಎಂಬ ಒಂದು ಪ್ರದೇಶವಿದೆ. ಈ ಪ್ರದೇಶದಲ್ಲಿ ಹಕ್ಕಿಪಿಕ್ಕಿ ಜನಾಂಗದ ಅನೇಕ ಕುಟುಂಬಗಳು ವಾಸ ಮಾಡುತ್ತಿದೆ. ಈ ಹಕ್ಕಿಪಿಕ್ಕಿ ಜನಾಂಗದ ಅನಿಷ್ಠ ಆಚರಣೆಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ.
![undefined](https://s3.amazonaws.com/saranyu-test/etv-bharath-assests/images/ad.png)
ಈ ಕುಟುಂಬದ ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ತಮ್ಮ ಮನೆಯಿಂದ ಹೊರಗೆ ಇರಬೇಕು. ಹೆರಿಗೆಯಾದರೂ ಸಹ ಮನೆಯಿಂದ ಹೊರಗೆ ಇರಬೇಕು ಎಂಬ ಅನಿಷ್ಠ ಪದ್ಧತಿ ಇನ್ನೂ ಅಲ್ಲಿ ಆಚರಣೆಯಲ್ಲಿದೆಯಂತೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರತ್ಯೇಕವಾಗಿ ವಾಸ ಮಾಡಲು ಒಂದು ಗುಡಿಸಲು ಹಾಕಲಾಗಿರುತ್ತದೆ. ಹೆರಿಗೆಯಾದ ಮತ್ತು ಋತುಚಕ್ರವಾದ ಸಂದರ್ಭದಲ್ಲಿ ಅವರನ್ನು ಯಾರೂ ಮುಟ್ಟುವ ಹಾಗಿಲ್ಲವಂತೆ. ಹೀಗಾಗಿ, ಆ ಮಹಿಳೆಯರು ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ. ಹೇಳಿಕೊಂಡರೆ ಎಲ್ಲಿ ಮನೆಯವರ ವಿರೋಧ, ಆಚರಣೆಗೆ ಧಕ್ಕೆ ಬರುತ್ತದೆ ಎಂಬ ಭಯದಿಂದ ಯಾರಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ದಾವಣಗೆರೆ ಭಾಗದಲ್ಲಿ ಕಂಡು ಬರುತ್ತಿದ್ದ ಇಂತಹ ಪದ್ಧತಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯೂ ಸದ್ದಿಲ್ಲದೆ ಅಸ್ತಿತ್ವದಲ್ಲಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಇದರಿಂದ ಬೇಯುತ್ತಿರುವ ಆ ಸಮುದಾಯದ ಮಹಿಳೆಯರನ್ನು ಹೊರ ತರಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.