ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಭಾಷಣಕ್ಕೆ ಸೀಮಿತವಾಗಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿರುವ ಅವರು, 7 ವರ್ಷದಲ್ಲಿ ಪ್ರಧಾನಿ ಮೋದಿ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಆಮ್ಲಜನಕ ನೀಡಲು ಕೇಂದ್ರ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಆಮ್ಲಜನಕ ನೀಡುವಂತೆ ಮಾಡಿದೆ. ಇದು ಕಾರ್ಯಾಂಗಕ್ಕೆ ಅವಮಾನ. ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಿದೆ ಎಂದರು.
ಇನ್ನು ನಮ್ಮ ರಾಜ್ಯಕ್ಕೆ ಬೇಕಾಗುವಷ್ಟು ಆಮ್ಲಜನಕ ಕೇಳುವ ಧಮ್ಮು ಇಲ್ಲಿಯ ನಾಯಕರಿಗಿಲ್ಲವೇ? ಯಡಿಯೂರಪ್ಪ ಅವರಿಗೂ ಆ ತಾಕತ್ತು ಇಲ್ಲ. ತಜ್ಞರ ಪ್ರಕಾರ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದೆ. ಈಗ ರಾಜ್ಯಕ್ಕೆ ಇನ್ನಷ್ಟು ಆಕ್ಸಿಜನ್ ಬೇಕಾಗಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಸಚಿವರು ವಿಫಲವಾಗಿದ್ದಾರೆ. ಅವರು ತಜ್ಞರಲ್ಲ, ಮೆಡಿಕಲ್ ಓದಿದ್ದಾರೆ, ಆದರೆ ಪ್ರಾಕ್ಟಿಸ್ ಮಾಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಹೊಂದಾಣಿಕೆ ಕೊರತೆಯೇ ಕೊರೊನಾ ಎರಡನೇ ಅಲೆ ಅಬ್ಬರಿಸಲು ಕಾರಣ ಎಂದು ಆರೋಪಿಸಿದರು.