ಕೊಪ್ಪಳ : ಜಮೀನು ಸರ್ವೆ ಮಾಡಿ ಪೋಡಿ ಮಾಡಲು ಸರ್ವೆ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ರೈತರಿಬ್ಬರು ಪ್ರಾದೇಶಿಕ ಆಯುಕ್ತರ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಕುಷ್ಟಗಿಯ ತಹಶೀಲ್ದಾರ್ ಕಚೇರಿ ಮುಂದೆ ನಡೆದಿದೆ.
ಕುಷ್ಟಗಿ ಪಟ್ಟಣದ ಮುತ್ತಮ್ಮ, ನಾಗರಾಜ ಎಂಬವರು ಪ್ರಾದೇಶಿಕ ಆಯುಕ್ತರ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ರು. ಕುಷ್ಟಗಿ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಆಗಮಿಸಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ರೈತರಿಬ್ಬರು ಕಾರಿಗೆ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ರು.
ಕುಷ್ಟಗಿ ಪಟ್ಟಣದ ಸರ್ವೆ ನಂಬರ್ 2 ರಲ್ಲಿ ಮುತ್ತಮ್ಮ ಹಾಗೂ ವಿರುಪಾಕ್ಷಪ್ಪ ಬಂಡಿ ಜಂಟಿಯಾಗಿ 3 ಎಕರೆ 34 ಗುಂಟೆ ಭೂಮಿ ಹೊಂದಿದ್ದಾರೆ. ಜಮೀನಿನ ಸರ್ವೆಗಾಗಿ ಈ ಇಬ್ಬರು ಸುಮಾರು ಐದಾರು ಬಾರಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದಾರೆ. ಆದರೆ, ಭೂಮಾಪಕರು ಸರ್ವೆ ಮಾಡದೆ ವಿಳಂಬ ಮಾಡುತ್ತಿದ್ದು, ಇದರಿಂದ ರೋಸಿ ಹೋದ ರೈತರು ಈ ರೀತಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಪೋಡಿ ಎಂದರೇನು?
"ಪೋಡಿ" ಎಂದರೆ ದುರಸ್ಥಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್ಟಿಸಿದಾರರ ಹೆಸರು ಒಂದೇ ಸರ್ವೇ ನಂಬರ್ನಲ್ಲಿದ್ದರೆ, ಅದನ್ನು ಬಹುಮಾಲೀಕತ್ವದ ಆರ್ಟಿಸಿ ಎನ್ನಲಾಗುತ್ತದೆ. ಇಂತಹ ಜಮೀನುಗಳನ್ನು ಪೋಡಿ (ಭಾಗ) ಮಾಡಬೇಕಾಗುತ್ತದೆ.