ಗಂಗಾವತಿ: ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೊಬ್ಬನನ್ನು ಮಾತನಾಡಿಸಿದ ನಾಲ್ವರು ಯುವಕರ ಗುಂಪು, ಸೇದಲು ಬೀಡಿ ನೀಡುವಂತೆ ಒತ್ತಾಯಿಸಿದ್ದಾರೆ. ಬೀಡಿ ನೀಡಿದ ಆತನನ್ನು ವಿನಾಕಾರಣ ಥಳಿಸಿ ಆತನ ಬಳಿಯಿದ್ದ ಹಣ ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ನಗರದ 18 ಸಮಾಜದ ರುದ್ರಭೂಮಿ ಸಮೀಪ ಈ ಘಟನೆ ನಡೆದಿದೆ. ಘಟನೆಯಲ್ಲಿ ಯುವಕರಿಂದ ಹಲ್ಲೆಗೊಳಗಾದವರನ್ನು ಸಿಂಧನೂರಿನ ಮರಿಯಪ್ಪ ಬಸಪ್ಪ ಎಂದು ಗುರುತಿಸಲಾಗಿದ್ದು, ಈತ ನಗರದಲ್ಲಿರುವ ತನ್ನ ನೆಂಟರ ಮನೆಗೆ ಬಂದಿದ್ದ ಎನ್ನಲಾಗಿದೆ.
ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇದೀಗ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದು, ಘಟನೆಯಲ್ಲಿ ಪರಾರಿಯಾಗಿದ್ದ ನಾಲ್ವರ ಪೈಕಿ ಇದೀಗ ಅಲ್ತಾಫ್ ಎಂಬ ಯುವಕನನ್ನು ಕೆಲವರು ಹಿಡಿದು ತಂದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.