ಕುಷ್ಟಗಿ (ಕೊಪ್ಪಳ): ತಾಲೂಕಿನ ಕಂದಕೂರು ಸೀಮಾದಲ್ಲಿ ಕೊನಸಾಗರ ಗ್ರಾಮದ ರೈತರೊಬ್ಬರು ತೈವಾನ್ ಪಿಂಕ್ ತಳಿ ಪೇರಲ ಬೆಳೆದಿದ್ದಾರೆ. ಗಜ ನಿಂಬೆ (ಚಕ್ಕೋತ) ಗಾತ್ರದ ಈ ಹಣ್ಣು 350 ರಿಂದ 600 ಗ್ರಾಂ ತೂಕವಿದೆ. ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಿದ್ದು, ರುಚಿಯ ಸ್ವಾಧೀಷ್ಟದಲ್ಲಿ ಸೈ ಎನಿಸಿಕೊಂಡಿದೆ.
ಕುಷ್ಟಗಿ-ಹೊಸಪೇಟೆ ಸುವರ್ಣ ಚತುಷ್ಪಥ ಹೆದ್ದಾರಿ ಕುರಬನಾಳ ಕ್ರಾಸ್ ಸಮೀಪದಲ್ಲಿ ಕೊನಸಾಗರದ ರೈತ ನಾಗರಾಜ್ ರೆಡ್ಡಿ ಅವರು ತಮ್ಮ 5 ಎಕರೆ ಪ್ರದೇಶದಲ್ಲಿ ತೈವಾನ್ ಪಿಂಕ್ ತಳಿಯ 3,600 ಪೇರಲ ಗಿಡ ನಾಟಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಾಟೀ ಮಾಡಿದ್ದು, ಮಾರನೇ ವರ್ಷದ 11ನೇ ತಿಂಗಳಿನಿಂದ ಇಳುವರಿ ಆರಂಭವಾಗಿದೆ. ಮೊದಲ ಹಂತವಾಗಿ ಗಿಡಗಳು ಚಿಕ್ಕವು ಎನ್ನುವ ಕಾರಣದಿಂದ ಸ್ಥಳೀಯವಾಗಿ ಮಾರಾಟ ಮಾಡಿದ್ದರು. ಪ್ರಸಕ್ತ ವರ್ಷದಲ್ಲಿ ಭರ್ಜರಿ ಇಳುವರಿ ಬಂದಿದ್ದು, ಉತ್ಕೃಷ್ಟ ಗುಣಮಟ್ಟದ ಹಣ್ಣುಗಳು ಬೆಳೆದಿವೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ತೋಟದ ಪೇರಲ ಗಮನಿಸುವ ಪ್ರಯಾಣಿಕರು ವಾಹನ ನಿಲ್ಲಿಸಿ ತಮಗೆ ಬೇಕಿರುವಷ್ಟು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ತೋಟಕ್ಕೆ ಬಂದ ಗ್ರಾಹಕರಿಗೆ 30ರೂ. ಗೆ ಕೆ.ಜಿಯಂತೆ ಮಾರಾಟ ಮಾಡಲಾಗುತ್ತಿದ್ದು, ತಾಜಾ ಹಣ್ಣುಗಳನ್ನು ಮನೆಗೆ ಒಯ್ಯುವುದು ಪ್ರಯಾಣಿಕರಿಗೆ ಖುಷಿ ಎನಿಸಿದೆ. ಹೆದ್ದಾರಿ ಬದಿಯಲ್ಲಿ ಹಣ್ಣು ಮಾರುವ ವ್ಯಾಪಾರಿಗಳು ಇದ್ದಲ್ಲಿಗೆ ಬಂದು ಖರೀದಿಸಿ ಮಾರುತ್ತಿದ್ದು, ಇದೇ ರೀತಿಯ ಮಾರಾಟ ಪ್ರತಿ ನಿತ್ಯ 5 ರಿಂದ 10 ಕ್ವಿಂಟಲ್ ಗೂ ಅಧಿಕ ಮಾರಾಟವಾಗುತ್ತಿದೆ ಎನ್ನುತ್ತಾರೆ ತೋಟದ ಕಾರ್ಮಿಕ ದೇವಪ್ಪ ಪಾಳೇದಾರ.
ಸೇಬುಗಿಂತ ಸೀಬೆ ಬೆಸ್ಟ್: ಇತ್ತೀಚಿನ ದಿನಮಾನಗಳಲ್ಲಿ ಪೇರಲ (ಸೀಬೆ) ಬೇಡಿಕೆ ಹೆಚ್ಚಿದ್ದು, ಅದರಲ್ಲಿ ಮಧುಮೇಹ ರೋಗಿಗಳಿಗೆ ಇಷ್ಟವಾದ ಹಣ್ಣಾಗಿದ್ದು, ಇದರಲ್ಲಿ ಸಿ ವಿಟಾಮಿನ್ ಜಾಸ್ತಿ ಇದೆ. ಎಲ್ಲಾ ಕಾಯಿಲೆಗೂ ರಾಮಬಾಣ ಎನ್ನುವುದು ಪ್ರಚಲಿತದಲ್ಲಿದೆ. ದೇಹಕ್ಕೆ ಅಗತ್ಯವಿರುವಷ್ಟು ಪೌಷ್ಠಿಕಾಂಶ ನೀಡುತ್ತಿದ್ದು, ಡಯಟಿಂಗ್ ಹಾಗೂ ಕೊಬ್ಬಿನಾಂಶ ಪ್ರಮಾಣ ಕುಂಠಿತಗೊಳಿಸುತ್ತದೆ. ಈ ಹಣ್ಣಿನಲ್ಲಿ ಪೈಬರ್ ಸಮೃದ್ಧವಾಗಿರುವುದರಿಂದ ಹೃದಯವನ್ನು ಉತ್ತಮಗೊಳಿಸಬಲ್ಲದು. ಇದರಲ್ಲಿ ಪೊಟ್ಯಾಷಿಯಂ ಇರುವ ಹಿನ್ನೆಲೆಯಲ್ಲಿ ರಕ್ತದ ಒತ್ತಡ ನಿಯಂತ್ರಿಸಬಲ್ಲದು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸಲಿದೆ. ಇದರಲ್ಲಿರುವ ಪಾಲಿಸ್ಯಾಕರೈಡ್ ಎಂಬ ಕಾರ್ಬೋ ಹೈಡ್ರೇಟ್, ಉತ್ಕರ್ಷಣ ನಿರೋಧಕವಾಗಿ ಕೆಲಸ ನಿರ್ವಹಿಸುತ್ತಿದೆ.
ನಿವಾರ್ ಈಫೆಕ್ಟ್ನಿಂದ ಎಲ್ಲೆಡೆ ಮೊಡ ಕವಿದ ವಾತವರಣವಿದೆ, ಈ ಸಂಧರ್ಭದಲ್ಲಿ ಹಣ್ಣನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲು ವಾತವರಣದಲ್ಲಿ ಈ ಹಣ್ಣಿಗೆ ಬೇಡಿಕೆ ಬರುತ್ತಿದ್ದು, ನಮ್ಮ ತೋಟದ ಹಣ್ಣುಗಳನ್ನು ಬೆಂಗಳೂರು ಮಾರುಕಟ್ಟೆಗೆ ರವಾನಿಸಲು ಯೋಜಿಸಲಾಗಿದೆ. ನಿವಾರ್ ಸೈಕ್ಲೋನ್ ಇರದೇ ಇದ್ದಲ್ಲಿ ಪೇರಲ ಹಣ್ಣುಗಳು ಭರ್ಜರಿ ಮಾರಾಟವಾಗುತ್ತಿದ್ದವು. ಈ ತಿಂಗಳಲ್ಲಿ 5 ಟನ್ ಕಟಾವು ಮಾಡಲಾಗಿದೆ. ಪ್ರತಿ ಸಸಿಗೆ 50 ರೂ. ಎಕರೆಗೆ ಹನಿ ನೀರಾವರಿ ಪೈಪಲೈನ್, ಔಷಧಿ ನಿರ್ವಹಣೆ 2 ಲಕ್ಷ ರೂ. ಖರ್ಚು ವೆಚ್ಚವಾಗಿದೆ ಎಂದು ತೋಟದ ಮಾಲೀಕ ನಾಗರಾಜ್ ರಡ್ಡಿ ಮಾಹಿತಿ ನೀಡಿದರು.
1 ವರ್ಷದಲ್ಲಿ 100 ಹೆಕ್ಟೇರ್ ವಿಸ್ತರಣೆಯಾದ ಪೇರಲ : ಪ್ರಸಕ್ತ ವರ್ಷದಲ್ಲಿ ಪೇರಲ 100 ಹೆಕ್ಟೇರ್ ಕ್ಷೇತ್ರದಲ್ಲಿ ವಿಸ್ತರಣೆಯಾಗಿದೆ. ಈ ಬೆಳೆಗೆ ರೋಗ ನಿಯಂತ್ರಣ, ಔಷಧಿ ನಿರ್ವಹಣೆ, ರೋಗಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಸಿಗುತ್ತಿದೆ. ತಾಲೂಕಿನಲ್ಲಿ ಪೇರಲ ಕೃಷಿ ಈವರೆಗೆ 350 ಹೆಕ್ಟೇರ್ ವಿಸ್ತರಣೆಯಾಗಿದೆ ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಾ ಪ್ರಸಾದ್ ಮಾಹಿತಿ ನೀಡಿದರು.