ಕೊಪ್ಪಳ: ಪ್ರೇಯಸಿಯ ಶೀಲ ಶಂಕಿಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಿಯಕರ, ಮೃತದೇಹವನ್ನು ಹೂತು ಹಾಕಿದ್ದಾನೆ. ಇಂಥದ್ದೊಂದು ಅಮಾನವೀಯ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ನಡೆದಿದೆ.
ಮದ್ದಾನವ್ವ (19) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ಯಲ್ಲಪ್ಪ ಬಮ್ಮನಗೌಡ ಕೊಲೆ ಆರೋಪಿ. ಮೃತ ಮದ್ದಾನವ್ವ ಯಲ್ಲಪ್ಪ ಬಮ್ಮನಗೌಡನನ್ನು ಪ್ರೀತಿಸುತ್ತಿದ್ದಳು. ಒಂದು ವರ್ಷದ ನಂತರ ಮದುವೆ ಮಾಡುವುದಾಗಿ ಎರಡು ಕುಟುಂಬದವರು ಒಪ್ಪಿಕೊಂಡಿದ್ದರಂತೆ. ಮದ್ದಾನವ್ವನ ಮನೆಯವರು ಆಕೆಯನ್ನು ಯಲ್ಲಪ್ಪನ ಜೊತೆಗೆ ಬಿಟ್ಟಿದ್ದರು. ಆದರೆ, ಕಳೆದ 15 ದಿನಗಳಿಂದ ಆಕೆ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ಮನೆಯವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಯುವತಿ ಮನೆಯವರ ದೂರು ಸ್ವೀಕರಿಸಿದ ಪೊಲೀಸರು, ಪ್ರಿಯಕರ ಯಲ್ಲಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯತಮೆ ಮದ್ದಾನವ್ವಳನ್ನು ಕೊಲೆ ಮಾಡಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ.

ಪೊಲೀಸರ ಮಾಹಿತಿಯಂತೆ ಮದ್ದಾನವ್ವಳ ಶೀಲ ಶಂಕಿಸಿದ ಯಲ್ಲಪ್ಪ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆತನ ಸಹೋದರ ರಮೇಶ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ. ಆರೋಪಿಗಳು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಮುರಡಿ ಬಳಿಯ ಜಮೀನಿನಲ್ಲಿ ಹೂತು ಹಾಕಿದ್ದರು.
ಯಲ್ಲಪ್ಪ ನೀಡಿದ ಮಾಹಿತಿ ಆಧರಿಸಿ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಸಹಾಯದಿಂದ ಜಮೀನಿನಲ್ಲಿ ಹೂತ ಶವವನ್ನು ಪೊಲೀಸರು ಹೊರ ತೆಗೆಸಿದ್ದು ಪ್ರಕರಣದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಮೈಸೂರು : ಬಾವನ ಜೊತೆಗೆ ಪಾರ್ಟಿಗೆ ಹೋದ ಬಾಮೈದ ನೀರುಪಾಲು