ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಜೆಡಿಎಸ್ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 9ನೇ ತಾರೀಖು ವೆಂಕಟಶಿವಾರೆಡ್ಡಿ ವಿರುದ್ದ ಶ್ರೀನಿವಾಸಪುರದ ಜೆಎಂಎಫ್ಸಿ ಕೋಟ್೯ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರಿಂದ ಕೆರಳಿದ ಅವರು ನಾನು ಬಡವ ಎಂದು ಸುಳ್ಳು ಹೇಳಿ ಜನರನ್ನು ಮರಳು ಮಾಡಿ ರಾಜಕೀಯ ಮಾಡ್ತಿದ್ದಾರೆ ಎಂದು ಹರಿಹಾಯ್ದರು.
ವಿಧಾನಸಭೆಯಲ್ಲಿ ನಾನು ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸುತ್ತೀಯಾ.. ನಾನು ಸಾಚ, ಬಡವ ಅಂತಾ ನೀನು ಮಾತಾಡ್ತೀಯಾ.. ಪ್ರಾಮಾಣಿಕ ರಾಜಕಾರಣಿ ತರ ಪೋಸ್ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡತ್ತಿದ್ದೀನಿ ಅಂತಾ ಹೇಳ್ತೀಯ. ಆದರೆ, ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಆಗಲ್ವಾ ಮಿಸ್ಟರ್ ರಮೇಶ್ ಕುಮಾರ್, ನಿನಗೆ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ರು.
ತಮ್ಮ ಸ್ವಗ್ರಾಮ ಅಡ್ಡಗಲ್ನ ಪಕ್ಕದ ಹೊಸಹುಡ್ಯ ಗ್ರಾಮದಲ್ಲಿ ಅಧಿಕಾರಿಗಳನ್ನು ಬೆದರಿಸಿ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ರಮೇಶ್ಕುಮಾರ್ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಂತರ ಬೆಲೆ ಬಾಳುವ ಕಾಂಪ್ಲೆಕ್ಸ್ ಇದೆ. ಥಣಿಸಂದ್ರದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಮಗನ ಹೆಸರಿನಲ್ಲಿ ಮನೆ ಇದೆ. ಅತ್ತಿಕುಂಟೆಯ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ 11ನೇ ಅರೋಪಿ. ಅಡ್ಡಗಲ್ನ ಶ್ಯಾಮ್ ಸುಂದರ್ ರೆಡ್ಡಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ ಎಂದು ಆರೋಪಗಳ ಸುರಿಮಳೆ ಸುರಿಸಿದ್ರು.
40 ವಷ೯ಗಳಿಂದ ರಾಜಕಾರಣ ಮಾಡ್ತಿರೋ ರಮೇಶ್ ಕುಮಾರ್ ನಾನು ಬಡವ ಅಂತಾ ಶ್ರೀನಿವಾಸಪುರ ತಾಲೂಕಿನ ಜನರನ್ನ ವಂಚನೆ ಮಾಡಿ ಜನತೆಯ ರಕ್ತ ಹೀರುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.