ಕೋಲಾರ: ಕೊರೊನಾ ಲಾಕ್ಡೌನ್ನಿಂದ ಎರಡು ತಿಂಗಳು ಬಂದ್ ಆಗಿದ್ದ ಜಿಲ್ಲೆಯ ದೇವಾಲಯಗಳು ಈಗ ಬಾಗಿಲು ತೆರೆಯಲು ಸಜ್ಜಾಗುತ್ತಿವೆ. ಈ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಜಿಲ್ಲೆಯ ಪ್ರಸಿದ್ಧ ದೇವಾಲಯಗಳಾದ ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿಯಲ್ಲಿಯ ಬಂಗಾರು ತಿರುಪತಿ, ಮುಳಬಾಗಿಲು ತಾಲೂಕಿನ ಆವಣಿಯ ರಾಮಲಿಂಗೇಶ್ವರ, ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ, ಅಂತರಗಂಗೆ ಸೇರಿದಂತೆ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿದೆ.
ದೇಗುಲಗಳಿಗೆ ಬೀಗ ಜಡಿದು 76 ದಿನಗಳು ಕಳೆದಿತ್ತು.ಇದೀಗ ಸರ್ಕಾರ ಹಲವು ಸಡಿಲಿಕೆಗಳೊಂದಿಗೆ ನಾಳೆಯಿಂದ ದೇವಸ್ಥಾನಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ. ಪುರಾಣ ಪ್ರಸಿದ್ದ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸುಮಾರು ಎರಡು ಅಡಿಗಳ ಅಂತರದಲ್ಲಿ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇಗುಲಗಳಲ್ಲಿ ಸಂಗ್ರಹವಾಗುವ ದೇಣಿಗೆ ಆಧರಿಸಿ ಎ.ಬಿ.ಸಿ ದರ್ಜೆಯ ದೇವಾಲಯಗಳೆಂದು ವಿಂಗಡಿಸಲಾಗಿದೆ. ಈ ಪೈಕಿ ಎ ದರ್ಜೆಯಲ್ಲಿನ ಮೂರು ದೇಗುಲಗಳ ಆದಾಯವು ಒಂದು ಕೋಟಿ ರೂಪಾಯಿ ಮೀರಿದೆ.