ಕೋಲಾರ: ಹಲವು ದಿನಗಳಿಂದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೋಲಾರ ತಾಲ್ಲೂಕು ಚಿಕ್ಕಅಯ್ಯೂರು ಗ್ರಾಮದ ಬಳಿಯ ಅರಾಭಿಕೊತ್ತನೂರು ಪ್ರದೇಶದಲ್ಲಿರುವ ಬೆಟ್ಟಗಳ ಸಾಲಿನಲ್ಲಿ ಹಲವು ವರ್ಷಗಳಿಂದ ಹತ್ತಾರು ಚಿರತೆಗಳು ವಾಸವಾಗಿವೆ, ಆಗಾಗ ಈ ಗ್ರಾಮಗಳಿಗೆ ಬಂದು ಕುರಿ, ಕೋಳಿ, ನಾಯಿಗಳನ್ನು ತಿಂದು ಹೋಗೋದು ಸಾಮಾನ್ಯವಾಗಿತ್ತು. ಜೊತೆಗೆ ಈ ಭಾಗದಲ್ಲಿ ಕರಡಿ, ಕಾಡು ಹಂದಿಗಳ ಹಾವಳಿ ಕೂಡಾ ಹೆಚ್ಚಿದೆ. ಹಾಗಾಗಿ ಕಳೆದ ರಾತ್ರಿ ಗ್ರಾಮದ ಅಪ್ಪಯ್ಯಣ್ಣ ಅನ್ನೋ ರೈತರೊಬ್ಬರು ತಮ್ಮ ಬೆಳೆಗೆ ಕಾಡು ಹಂದಿಯ ಹಾವಳಿ ತಡೆಯಲು ತಮ್ಮ ಹೊಲಕ್ಕೆ ಉರುಳು ಹಾಕಿದ್ದರು ಆದರೆ ಕಾಡು ಹಂದಿಗೆ ಹಾಕಿದ್ದ ಉರುಳಿಗೆ ನಾಲ್ಕು ವರ್ಷದ ಹೆಣ್ಣು ಚಿರತೆ ಬಂದು ಸೆರೆಸಿಕ್ಕಿ ಒದ್ದಾಡುತ್ತಿತ್ತು, ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಚಿರತೆ ಸಿಕ್ಕಿಹಾಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಅರವಳಿಕೆ ತಜ್ಞ ಉಮಾಶಂಕರ್ ಅವರನ್ನು ಕರೆಸಿದರು, ಅವರು ಗನ್ ಮೂಲಕ ಚಿರತೆಗೆ ಶೂಟ್ ಮಾಡಿ ಅರವಳಿಕೆ ಮದ್ದು ನೀಡಿ ನಂತರ ಬಲೆ ಹಾಕಿ ಚಿರತೆಯನ್ನು ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕಳುಹಿಸಿಕೊಡಲಾಯಿತು.
ಇನ್ನು ಚಿರತೆ ಉರುಳಿಗೆ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಚಿರತೆ ನೋಡಲು ಬಂದು ಜಮಾಯಿಸಿದ್ದರು. ಜೊತೆಗೆ ಈ ಭಾಗದಲ್ಲಿ ಚಿರತೆ, ಕಾಡು ಹಂದಿ, ಕರಡಿ ಕಾಟ ಹೆಚ್ಚಾಗಿದ್ದು ಅದನ್ನು ನಿಯಂತ್ರಣ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.