ಕೋಲಾರ: ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಅಂತ ಟೀಕೆ ಮಾಡುವವರು ಕಳೆದ ಬಾರಿ ನಮ್ಮ ಮನೆ ಬಾಗಿಲು ಏಕೆ ಕಾದಿದ್ದರು ಎಂದು ಕಾಂಗ್ರೆಸ್ ನಾಯಕರ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್, ಬಿ ಟೀಮ್ ಅನ್ನುವ ಬದಲು ಕತ್ತಿಗೆ ಸ್ಲೇಟ್ ಹಾಕಿಕೊಂಡು ದಿನವೂ ಓಡಾಡಲಿ ಎಂದು ಕಿಡಿಕಾರಿದರು.
ಕಾಂಗ್ರೆಸ್ನ ನಡವಳಿಕೆ ಬಗ್ಗೆ ನಾಡಿನ ಜನತೆಗೆ ಬಿಟ್ಟಿದ್ದೇನೆ. ದೇವೇಗೌಡರು ಒಬ್ಬ ಜನಪ್ರತಿನಿಧಿಯಾಗಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯವರಿಗೆ ಮಾತ್ರ ಪ್ರಧಾನಿಯಲ್ಲ, ಈ ದೇಶದ ಪ್ರಧಾನಿಯಾಗಿದ್ದಾರೆ. ದೇವೇಗೌಡರು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಜ್ವರಕ್ಕೆ ವಿದ್ಯಾರ್ಥಿನಿ ಬಲಿ: ಕೊಳ್ಳೇಗಾಲದಲ್ಲಿ ಬಾಲಕಿಗೆ ಅಂಟಿದ ಕೊರೊನಾ
ಬಿಜೆಪಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಚುನಾವಣೆ ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿದೆ. ಜನರೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದರು. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷ ಮುಗಿಸಲು ಮುಂದಾಗಿವೆ. 2023 ರಲ್ಲಿ ಜೆಡಿಎಸ್ ಪಕ್ಷ ಏನೆಂದು ತೋರಿಸುತ್ತೇವೆ. ಒಮಿಕ್ರಾನ್ ಬಗ್ಗೆ ಸಭೆಗಳನ್ನು ನಡೆಸದೇ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಜನರ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಇದ್ದರು.