ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟದ ನಡುವೆ ಸೈಬರ್ ಖದೀಮರ ಕಾಟ ತಾರಕಕ್ಕೇರಿದೆ. ಆನ್ಲೈನ್ ವ್ಯವಹಾರವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಹ್ಯಾಕರ್ಗಳು, ಒಳ್ಳೊಳ್ಳೆ ಆಫರ್ಗಳು, ಕೋಟಿ ಕೋಟಿ ಬಹುಮಾನದ ಆಸೆ ತೋರಿಸಿ, ಜನರಿಗೆ ಮರುಳು ಮಾಡಿ ಬ್ಯಾಂಕ್ ಅಕೌಂಟ್ ಪಾಸ್ವರ್ಡ್ ಪಡೆದು ಅಮಾಯಕರನ್ನ ವಂಚಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ನಿತ್ಯ ಐದಾರು ಆನ್ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿಯೊಬ್ಬರು ಸ್ಮಾರ್ಟ್ಫೋನ್ ಬಳಸುವುದರಿಂದ ಬಹುತೇಕರು ಎಲ್ಲ ಹಣಕಾಸು, ವ್ಯಾಪಾರ-ವಹಿವಾಟು ವ್ಯವಹಾರ ಆನ್ಲೈನ್ ಮೂಲಕವೇ ಮಾಡಿ ಮುಗಿಸುತ್ತಾರೆ. ಸೈಬರ್ ಭದ್ರತೆ ಬಗ್ಗೆ ಅರಿವಿರುವುದಿಲ್ಲ ಅನ್ನೋದನ್ನೆ ಬಂಡವಾಳ ಮಾಡಿಕೊಂಡ ಹ್ಯಾಕರ್ಗಳು ವಂಚನೆಯ ಜಾಲ ಬೀಸುತ್ತಾರೆ. ಕಾರ್, ಬೈಕ್,ಬಹುಮಾನ ಸೇರಿದಂತೆ ಹಲವು ರೀತಿಯ ಮೆಸೇಜ್ ಗಳ ಮೂಲಕ ಜನರಿಗೆ ಆಸೆ ಹುಟ್ಟಿಸಿ ಬಳಿಕ ಆನ್ಲೈನ್ ಮೂಲಕ ಹಣವನ್ನ ತಮ್ಮ ಖಾತೆಗೆ ಹಾಕಿಸಿಕೊಂಡು ಮೋಸ ಮಾಡುತ್ತಾರೆ.
ಇನ್ನು, ನಿರುದ್ಯೋಗಿ ಯುವಕರು ಒಳ್ಳೊಳ್ಳೆ ಕೆಲಸ ಪಡೆಯುವ ಆಸೆ - ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಮೊದಲಿಗೆ ವಾಟ್ಸ್ಆ್ಯಪ್, ಪೇಸ್ಬುಕ್ನಲ್ಲಿ ಕೆಲವೊಂದು ಮೆಸೇಜ್ ಮಾಡಿ ಆಫರ್ಗಳನ್ನ ನೀಡುವ ವಂಚಕರು ನಂತರ ಹಣವನ್ನ ಫೇಕ್ ಬ್ಯಾಂಕ್ ಅಕೌಂಟ್ಗೆ ಕಟ್ಟಿಕೊಳ್ಳುತ್ತಾರೆ. ನಂತರ ಫೋನ್ ಮಾಡಿ ಅವರನ್ನ ತಮ್ಮ ಮರಳು ಮಾತುಗಳಿಂದ ಬಲೆಗೆ ಬೀಳಿಸಿಕೊಂಡು ಸುಲಭವಾಗಿ ವಂಚನೆ ಮಾಡುತ್ತಾರೆ.
ಪ್ರತಿನಿತ್ಯ ಇಂತಹ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಹತ್ತಾರು ವಂಚನೆ ಮಾರ್ಗಗಳನ್ನು ಕಂಡುಕೊಂಡಿರುವ ಹ್ಯಾಕರ್ಗಳು ಮೊದಲಿಗೆ ಕಾರು ಬಹುಮಾನ, ಕೆಲ ಆಫರ್ ಬಂದಿದೆ ಎಂಬ ಸುಳ್ಳು ಮೆಸೇಜ್ ಕಳಹಿಸುತ್ತಾರೆ. ನಕಲಿ ಲಿಂಕ್ಗಳ ಮೂಲಕ ಪರಿಚಯ ಮಾಡಿಕೊಂಡ ಬಳಿಕ ನಂತರ ಮರಳು ಮಾತುಗಳನ್ನಾಡಿ ನಾನಾ ರೀತಿಯಲ್ಲಿ ಸ್ನೇಹ ಬೆಳೆಸಿಕೊಂಡು ನಕಲಿ ಖಾತೆಗಳ ಮೂಲಕ ತಮ್ಮ ಖೆಡ್ಡಾಕ್ಕೆ ಬೀಳಿಸಿಕೊಳುತ್ತಾರೆ.
ಜೊತೆಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ, ಬ್ಯಾಂಕ್ ನಿಂದ ಕರೆ ಮಾಡಿದ ಹಾಗೆ ಅಕೌಂಟ್ ನಂಬರ್ ಪಡೆದು, ಎಟಿಎಂ ಪಾಸ್ವರ್ಡ್ ಪಡೆದು ಹಣವನ್ನು ಸುಲಭವಾಗಿ ಖದಿಯುತ್ತಾರೆ. ಮಾತ್ರವಲ್ಲದೇ ಪಿಎಂ ರಿಲೀಫ್ ಫಂಡ್, ಸಿಎಂ ರಿಲೀಪ್ ಫಂಡ್ ಎಂದು, ಕೆಲ ಪೊಲೀಸರು ಹಾಗೂ ಬ್ಯಾಂಕ್ ನವರು ಎಂದು ಸುಳ್ಳು ಹೇಳಿ ಹಣ ಪಡೆಯುತ್ತಾರೆ. ಇದಾದ ಕೆಲ ದಿನಗಳ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣ ಎಗರಿಸೋದು ಆನ್ಲೈನ್ ವಂಚಕರ ವೃತ್ತಿ. ಹೀಗೆ ವಂಚನೆಯ ಜಾಲಕ್ಕೆ ಬಿದ್ದವರು ಸೈಬರ್ ಪೊಲೀಸರ ಮೊರೆ ಹೋಗುತ್ತಿದ್ದಾರೆ. ವಿಶೇಷತೆ ಎಂದ್ರೆ ಇದೆಲ್ಲವೂ ಕೂಡ ದಕ್ಷಿಣ ಭಾರತದ ರಾಜ್ಯಗಳಿಂದ ನಿರ್ವಹಣೆಯಾಗುತ್ತೆ, ಹಾಗಾಗಿ ಇಂತಹ ಕಳ್ಳರ ವಿರುದ್ಧ ಎಚ್ಚರವಿರಿ ಅನ್ನೋದು ಪೊಲೀಸ್ ಅಧಿಕಾರಿಗಳ ಮಾತು.