ಶನಿವಾರಸಂತೆ (ಕೊಡಗು): ಸರ್ಕಾರಿ ಕೆಲಸ ದೇವರ ಕೆಲಸ. ನನ್ನ ಕೆಲಸ ಆದ್ರೆ ಸಾಕಪ್ಪಾ ಎನ್ನುವ ಕಾಲದಲ್ಲಿ ಶನಿವಾರಸಂತೆಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡಿ ಗಮನ ಸಳೆದಿದ್ದಾರೆ.
ಕೇವಲ ವೃತ್ತಿಗೆ ಸೀಮಿತವಾಗದೇ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡಿ ಮರುಬಳಕೆ ಮಾಡುವ ಪ್ರವೃತ್ತಿಯನ್ನ ಬೆಳೆಸಿಕೊಂಡಿದ್ದಾರೆ. ಆ ಮೂಲಕ ಪರಿಸರ ಪ್ರೇಮಿಯಾಗಿ ಇತರರಿಗೆ ಮಾದರಿ ಆಗಿದ್ದಾರೆ.
ಅಡುಗೆ ಎಣ್ಣೆಯ ಕ್ಯಾನ್ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ. ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ.
ಸಾಮಾನ್ಯ ಕುಂಡಗಳಿಗಿಂತಲೂ ಇವು ಬಾಳಿಕೆಯಿಂದ ಕೂಡಿವೆ. ಕ್ಯಾನ್ಗಳು ನೆಲದಲ್ಲಿ ಇಡುವ ಕುಂಡಗಳು ಮಾತ್ರವಲ್ಲ. ಹ್ಯಾಂಗಿಂಗ್ ಪಾಟ್ಗಳು, ಗೋಡೆ ಮತ್ತು ಕಂಬಗಳಿಗೆ ಸಿಕ್ಕಿಸುವ ವಾಲ್ ಪಾಟ್ಗಳನ್ನಾಗಿಯೂ ಬಳಸಬಹುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳ ಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ವಿನ್ಯಾಸದ ಮಾಡಿರುವುದು ಇವರ ಕೈ ಚಳಕಕ್ಕೆ ಹಿಡಿದ ಕನ್ನಡಿಯಂತಿವೆ.
ಲಾಕ್ಡೌನ್ನ ರಜಾ ಅವಧಿಯಲ್ಲಿ ಈ ಹೂವಿನ ಕುಂಡಗಳನ್ನು ಸಿದ್ಧಪಡಿಸಿರುವ ಸತೀಶ್ ಅವರು ಈ ಹಿಂದೆ ಹಳೆಯ ಪ್ಲಾಸ್ಟಿಕ್ ಕ್ಯಾನ್ಗಳನ್ನು ಬಳಸಿ ಯೂರಿನಲ್ ಕಮೊಡ್ಗಳನ್ನೂ ನಿರ್ಮಿಸಿದ್ದರು. ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಮಾಡಬೇಕು. ಮನೆಗಳಿಗೆ ಅಗತ್ಯವಿರುವ ಅಲಂಕಾರಿಕ ಪಾಟ್ಗಳನ್ನು ಯಾವುದೇ ಖರ್ಚಿಲ್ಲದೇ ತಯಾರಿಸಬಹುದು ಎನ್ನುತ್ತಾರೆ ಮಾದರಿ ಶಿಕ್ಷಕರಾದ ಸತೀಶ್.