ಕೊಡಗು: ಕೊರೊನಾದಂತಹ ಸಂಕಷ್ಟದಲ್ಲೂ ಸಿಎಂ ಯಡಿಯೂರಪ್ಪ ಸರ್ಕಾರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಬಿಎಸ್ವೈ ನೇತೃತ್ವದಲ್ಲಿ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್ ಕಾರ್ಯಕ್ರಮ ಬಳಿಕ ಅವರು ಮಾತನಾಡಿದರು. ಸರ್ಕಾರದ ಸಾಧನೆಗಳನ್ನು ನೈಜ ಫಲಾನುಭವಿಗಳೇ ವಿವರಿಸಿದ್ದಾರೆ. ಕೊಡಗು ಭೌಗೋಳಿಕವಾಗಿ ವಿಶಿಷ್ಟವಾದ ಜಿಲ್ಲೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ ಮಾಡಲಾಗಿದೆ.
10.78 ಲಕ್ಷವನ್ನು ಮಡಿಕೇರಿ ಕೋಟೆಯ ಪುನಶ್ಚೇತನಕ್ಕೆ ನೀಡಲಾಗಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ 94 ಲಕ್ಷ ವೆಚ್ಚದಲ್ಲಿ ಹೂಳೆತ್ತಲಾಗುತ್ತಿದೆ. ಪ್ರವಾಹದಿಂದಾಗಿ ಜನರು 2,333 ಮನೆಗಳನ್ನು ಕಳೆದುಕೊಂಡಿದ್ದು, ಅಂತಹವರಿಗೆ 5 ಲಕ್ಷ ಹಣ ನೀಡಲಾಗಿದೆ. ಈ ವರ್ಷ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ನಗರಸಭೆಗಳಿಗೆ ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ರೈತರಿಗೆ 79(ಎ) (ಬಿ) ಜಾರಿಗೊಳಿಸಿ, 3 ಲಕ್ಷ ಬಾಕಿ ಉಳಿದಿದ್ದ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ಇತ್ಯರ್ಥಪಡಿಸಿದ್ದೇವೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ, ಗಿರಿಜನ ಕಾಲೋನಿಯ ರಸ್ತೆ, ಚರಂಡಿ ಹಾಗೂ ಅಂಗನವಾಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 10 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದರು.