ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ ಸೇರಿದಂತೆ ಮತ್ತಿತರೆ ಅಧಿಕಾರಿಗಳೊಂದಿಗೆ ಜಲಾಶಯದಲ್ಲಿ ತುಂಬಿರುವ ಹೂಳಿನ ಬಗ್ಗೆ ಮಾಹಿತಿ ಪಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಡ್ಯಾಂ ಒಳಗೆ ಮಣ್ಣು ಸಂಗ್ರಹವಾಗಿದ್ದು, ರೈತರ ಜಮೀನಿಗೆ ಬಳಸಲು ಫಲವತ್ತಾಗಿಲ್ಲ. ತೆಗೆದ ಹೂಳನ್ನು ಸಂಗ್ರಹಿಸಲು ಈಗಾಗಲೇ 15 ಎಕರೆ ಜಾಗ ಗುರುತಿಸಿದ್ದು, ಅದಕ್ಕೆ ಬೇಕಾದ ಅನುದಾನವೂ ಬಿಡುಗಡೆಯಾಗಿದೆ. ಮುಂದಿನ ಬೇಸಿಗೆಗೆ ಕೆಲಸ ಪ್ರಾರಂಭಿಸುವುದಾಗಿ ವಿವರಿಸಿದರು.
ಉಗ್ರರ ದಾಳಿಯ ಮುನ್ಸೂಚನೆ ಮೇರೆಗೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀಡಿರುವ ಭದ್ರತೆ ಹಾಗೂ ನೀರಿನ ಮಟ್ಟದ ಮಾಹಿತಿ ಪಡೆದರು. ಸಚಿವರ ಜೊತೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್, ಜಿಲ್ಲಾ ಪಂಚಾಯತ್ ಸಿಇಒ ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಜವರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಇದ್ದರು.