ಕಲಬುರಗಿ : ಸಫಾಯಿ ಕರ್ಮಚಾರಿಗಳ ಜೀವ ಮುಖ್ಯವಾಗಿದೆ. ಹೀಗಾಗಿ, ಮಲ ಹೊರುವ ಪದ್ದತಿಗೆ ನಿಷೇಧ ಹೇರಲಾಗಿದೆ. ಕಾರ್ಮಿಕರು ನಮ್ಮ ಸುರಕ್ಷತೆಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದರು.
ಡ್ರೈನೇಜ್ ಸ್ವಚ್ಛತೆ ವೇಳೆ ಇಬ್ಬರು ಸಾವನ್ನಪ್ಪಿದ ಹಿನ್ನೆಲೆ ನಗರದ ಎಸ್ಎಂ ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ಮ್ಯಾನುವಲ್ ಸ್ಕ್ಯಾವೆಂಜರ್ಸ್ ನಿಷೇಧ ಕಾಯ್ದೆ ಕುರಿತ ಕಾರ್ಯಾಗಾರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಪೌರ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಸಫಾಯಿ ಕರ್ಮಚಾರಿಗಳ ಜೀವ ಮುಖ್ಯವಾಗಿದೆ. ಹೀಗಾಗಿ, ಸುರಕ್ಷತೆಗಳನ್ನು ಪಾಲಿಸಿ ಮುನ್ನೆಚ್ಚರಿಕೆ ಕ್ರಮಗಳಿಂದ ಕೆಲಸ ಮಾಡಬೇಕು ಹಾಗೂ ಅಧಿಕಾರಿಗಳು ಸಹ ಪೌರ ಕಾರ್ಮಿಕರ ಸುರಕ್ಷತೆ ಮತ್ತು ಕಾಳಜಿವಹಿಸಬೇಕು ಎಂದು ಸೂಚಿಸಿದರು.
ಡಿಸಿಪಿ ಕಿಶೋರ್ ಬಾಬು, ಸಪಾಯಿ ಕರ್ಮಚಾರಿ ಆಯೋಗದ ಸದಸ್ಯೆ ಗೀತಾ ವಾಡೆಕರ್ ಸೇರಿ ಇತರರು ಕಾರ್ಯಾಗಾರದಲ್ಲಿದ್ದರು.