ಕಲಬುರಗಿ: ಹೆಲಿಟೂರಿಸಂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದ ಆರು ಸ್ಥಳಗಳಲ್ಲಿ ಹೆಲಿಪೋರ್ಟ್ ಸ್ಥಾಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ, ಹುಬ್ಬಳ್ಳಿ, ಹಂಪಿ, ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಿಮಾನ ಸಂಚಾರ ಇರುವುದರಿಂದ ಪ್ರಾಥಮಿಕ ಹಂತವಾಗಿ ಈ ಸ್ಥಳಗಳಲ್ಲಿ ಇಲಾಖೆಯಿಂದಲೇ ಹೆಲಿಪೋರ್ಟ್ ಅಭಿವೃದ್ಧಿ ಪಡಿಸಲಾಗುತ್ತಿದೆ. ನಾಲ್ಕೈದು ಎಕರೆ ಪ್ರದೇಶದಲ್ಲಿ ಹೆಲಿಪೋರ್ಟ್ ತಲೆ ಎತ್ತಲಿದ್ದು, ಪ್ರತಿಯೊಂದು ಹೆಲಿಪೋರ್ಟ್ಗೆ 10 ಕೋಟಿ ರೂ. ಖರ್ಚಾಗಬಹುದು ಎಂದು ಹೇಳಿದರು.
ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚಿಸಿ ಹೆದ್ದಾರಿಗೆ ಹೊಂದಿಕೊಂಡಂತೆ ಭೂಮಿಯನ್ನು 15 ದಿನದಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ನಿರ್ದೇಶನ ನೀಡಿದರು. 6 ಕಡೆ ಎಎಐ ವಿಮಾನ ನಿಲ್ದಾಣಗಳನ್ನು ಮತ್ತು ಇತರೆ ಖಾಸಗಿ ಹೆಲಿಪ್ಯಾಡ್ಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಮುಂದಿನ 2-3 ತಿಂಗಳಲ್ಲಿ ಹೆಲಿಕಾಪ್ಟರ್ ಹಾರಾಟ ಆರಂಭಿಸಲಾಗುವುದು. ಇದರ ಜೊತೆ-ಜೊತೆಯಲ್ಲಿಯೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು.
ಜಿಲ್ಲೆಯ ಚಂದ್ರಂಪಳ್ಳಿ ಜಲಾಶಯ, ಅಮರ್ಜಾ ಜಲಾಶಯ, ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್, ಕಲಬುರಗಿ ತಾಲೂಕಿನ ಖಾಜಾ ಕೋಟನೂರ ಕೆರೆ, ಭೋಸಗಾ ಕೆರೆ, ಸೇಡಂ ತಾಲೂಕಿನ ಬೀರನಳ್ಳಿಯಲ್ಲಿಯೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸ್ಥಾಪನೆ ಕುರಿತಂತೆ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರವೇ ಕಾರ್ಯಾನುಷ್ಟಾನಕ್ಕೆ ತರಲಾಗುವುದು ಎಂದರು.
ಸಬ್ಸಿಡಿ ನೀಡಲು ಇಲಾಖೆ ಸಿದ್ಧ:
ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದರು ಒಂದು ಸ್ಟಾರ್ ಹೋಟೆಲ್ಗಳಿಲ್ಲ. ಇದು ಪ್ರವಾಸೋದ್ಯಮಕ್ಕೆ ಮಾರಕವಾಗಿದೆ. ಸ್ಟಾರ್ ಹೋಟೆಲ್ ನಿರ್ಮಿಸಲು ಮುಂದೆ ಬಂದಲ್ಲಿ ಇಲಾಖೆಯಿಂದ ಶೇ.15ರಷ್ಟು ಸಬ್ಸಿಡಿ ನೀಡಲಾಗುವುದು. ಹಿಂದುಳಿದ ಪ್ರದೇಶ ಇದಾಗಿರುವುದರಿಂದ ಇನ್ನು ಹೆಚ್ಚುವರಿ ಶೇ.10ರಷ್ಟು ಸಬ್ಸಿಡಿ ನೀಡಲು ಸಹ ಇಲಾಖೆ ಸಿದ್ಧವಿದೆ. ಸ್ಟಾರ್ ಹೋಟೆಲ್ಗಳಿಗೆ ಕೈಗಾರಿಕಾ ಮಾನ್ಯತೆ ನೀಡಿದ್ದರಿಂದ ತೆರಿಗೆಯಲ್ಲಿ ವಿನಾಯಿತಿ ಜೊತೆಗೆ ವಿದ್ಯುತ್ ಬಿಲ್ಲು ಸಹ ಕಡಿಮೆ ಬರುತ್ತದೆ ಎಂದರು.
ಕಿಯೋಸ್ಕ್ ಸ್ಥಾಪಿಸನೆಗೆ ಸೂಚನೆ:
ಕಲಬುರಗಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಕಿಯೋಸ್ಕ್ ಸ್ಥಾಪಿಸಬೇಕು. ನಗರದ ಎಲ್ಲಾ ಹೋಟೆಲ್ಗಳಲ್ಲಿ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ದೊರೆಯುವಂತೆ ಬ್ರೋಚರ್ ಸಿದ್ಧಪಡಿಸಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.