ದಾವಣಗೆರೆ: "ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸಭೆ ಮಾಡುತ್ತೇವೆ. ವಿಜಯೇಂದ್ರ ಅವರು ಸಿಎಂ ಆಗಬೇಕು. ಅದಕ್ಕೆ ಏನು ಬೇಕೋ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡುತ್ತೇವೆ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಅಂದು ಯಡಿಯೂರಪ್ಪ ಸಿಎಂ ಆಗಲು ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರರೂ ಸೇರಿದಂತೆ ಎಲ್ಲಾ ಸಮಾಜಗಳು ಬೆಂಬಲ ಕೊಟ್ಟವು. ಆದರೆ ವೀರಶೈವ ಲಿಂಗಾಯತ ಸಮಾಜದಿಂದ ಮಾತ್ರ ರಾಜಕಾರಣ ಮಾಡಲು ಆಗಲ್ಲ. ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಮುಂದೆಯೂ ಸಹ ನಾವು ಅಧಿಕಾರಕ್ಕೆ ಬರುತ್ತೇವೆ. ಈಗಾಗಲೇ ನಾವು ಕೆಲ ಮಠಾಧೀಶರನ್ನು ಸಂಪರ್ಕಿಸಿದ್ದೇವೆ. ಆದರೆ, ಕೆಲವರು ಯಡಿಯೂರಪ್ಪನವರಿಗೆ ವೀರಶೈವ ಲಿಂಗಾಯತರ ಬೆಂಬಲ ಇಲ್ಲ ಎಂದು ಹೇಳ್ತಿದ್ದಾರೆ. ನಾವು ಮಠಾಧೀಶರರೊಂದಿಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಸಭೆ ಮಾಡಿ ಮಠಾಧೀಶರ ಬೆಂಬಲ ಪಡೆದು, ಯಡಿಯೂರಪ್ಪ, ವಿಜಯೇಂದ್ರರಿಗೆ ಸಂಪೂರ್ಣ ಸಮಾಜ ಜೊತೆಗಿರುವಂತೆ ನೋಡಿಕೊಳ್ಳುತ್ತೇವೆ" ಎಂದರು.
ಹಿಂದೂ ಹುಲಿನೋ ಇಲಿನೋ- ಯತ್ನಾಳ್ಗೆ ಟಾಂಗ್: "ಕೆಲವರು ಸ್ವಯಂಘೋಷಿತ ನಾಯಕರು. ಜನ ಮೆಚ್ಚಿದ ನಾಯಕರಾಗ್ಬೇಕೇ ಹೊರತು ಸ್ವಯಂಘೋಷಿತ ನಾಯಕರಾಗಬಾರದು. ನಾನು ವೀರಶೈವ ಲಿಂಗಾಯತ ಎನ್ನುತ್ತಾರೆ. ಇವರು ಹಿಂದೂ ಹುಲಿನೋ ಇಲಿನೋ. ಮತ್ತೊಮ್ಮೆ ಉತ್ತರ ಕರ್ನಾಟಕ ಎನ್ನುತ್ತಾರೆ, ಯಾವೂ ಇಲ್ಲ. ಇವೆಲ್ಲಾ ಮುಖವಾಡಗಳು. ನೀವು ವೀರಶೈವ ನಾಯಕರಲ್ಲ, ಡಮ್ಮಿ. ನೀವೆಲ್ಲ ತಿರಸ್ಕೃತ ನಾಣ್ಯಗಳು" ಎಂದು ಟೀಕಿಸಿದರು.
"ಜಿಲ್ಲೆಯಲ್ಲಿ ಕಾಂಗ್ರೆಸ್ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾರೋ ಮಾತನಾಡುತ್ತಾರೆಂದು ನಾವು ತಲೆಕೆಡಿಸಿಕೊಳ್ಳಲ್ಲ" ಎಂದರು. ಮುಂದುವರೆದು, "ಯಡಿಯೂರಪ್ಪನವರಿಗೆ ಅಂದು ದೇವೇಗೌಡ್ರು ಹೊಂದಾಣಿಕೆ ಸರ್ಕಾರ ಸಮಯದಲ್ಲಿ ಅಧಿಕಾರ ಕೊಡಲಿಲ್ಲ. ಆದರೆ ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು ಇನ್ನಿತರ ಸಮಾಜಗಳು ಬೆಂಬಲ ಕೊಟ್ಟಿದ್ದವು" ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ತುಷ್ಟೀಕರಣ ರಾಜಕಾರಣ : ಬಿ.ವೈ. ವಿಜಯೇಂದ್ರ ಕಿಡಿ - UDAYAGIRI INCIDENT