ಕಲಬುರಗಿ: ಕಲ್ಯಾಣ ನಾಡಿನ ಜನರ ಆರಾಧ್ಯ ದೈವ, ದಾಸೋಹ ಮೂರ್ತಿ ಕಲಬುರಗಿಯ ಶರಣಬಸವೇಶ್ವರರ 199 ನೇ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಅತಿ ಸರಳವಾಗಿ ಉಚ್ಚಾಯಿ (ಚಿಕ್ಕ ರಥ) ಎಳೆದು ಜಾತ್ರೆಗೆ ಚಾಲನೆ ನೀಡಲಾಯಿತು.
ನಾಳೆ ಶರಣಬಸವೇಶ್ವರರ ರಥೋತ್ಸವ ನಡೆಯಲಿದ್ದು, ಪೂರ್ವ ದಿನವಾದ ಇಂದು ಉಚ್ಚಾಯಿ ಎಳೆಯಲಾಯಿತು. ಸಾಮಾನ್ಯವಾಗಿ ಪ್ರತಿವರ್ಷ ಸಂಜೆ ನಡೆಯುತ್ತಿದ್ದ ಈ ಉತ್ಸವ ಕೊರೊನಾ ಕಾರಣ ಈ ವರ್ಷ ಮಧ್ಯಾಹ್ನ ನಡೆಯಿತು. ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಕಳೆದ ವರ್ಷ ಕೊರೊನಾದಿಂದಾಗಿ ಜಾತ್ರೆ ರದ್ದು ಪಡಿಸಲಾಗಿತ್ತು. ಈ ವರ್ಷ ಕೂಡ ಕೊರೊನಾ ಎರಡನೇ ಅಲೆ ಪ್ರಾರಂಭಗೊಂಡಿದ್ದು ಜಾತ್ರೆಯನ್ನು ಅತಿ ಸರಳವಾಗಿ ಆಚರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಯಾರೂ ಜಾತ್ರೆಗೆ ಬರಬಾರದು, ಮನೆಯಲ್ಲಿದ್ದು ಶರಣಬಸವೇಶ್ವರನನ್ನು ಆರಾಧಿಸಬೇಕು ಎಂದು ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಭಕ್ತರಲ್ಲಿ ಮನವಿ ಮಾಡಿದ್ದಾರೆ.