ಕಲಬುರಗಿ : ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ ಸವದಿ, ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಸಿಎಂ ಆದವರು. ಇಂತಹ ಶಬ್ದ ಬಳಕೆಯಿಂದ ಸಮಾಜದ ಮೇಲೆ ಏನಾಗುತ್ತದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಮಾಜವನ್ನು ತುಚ್ಛೀಕರಿಸಲು ಈ ರೀತಿಯ ಹೇಳಿಕೆ ನೀಡಿರೋದು ಸರಿಯಲ್ಲ ಎಂದರು.
ಇದೇ ವೇಳೆ ಸಿಎಂ ಬಿಎಸ್ವೈ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಬದಲಾವಣೆ ಕೇವಲ ಗಾಳಿ ಮಾತು. ಇಲ್ಲದೆ ಇರೋದಕ್ಕೆ ರೆಕ್ಕೆಪುಕ್ಕ ಕಟ್ಟಿ ಕಾಗೆ ಹಾರಿಸಲಾಗುತ್ತಿದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ ಎಂದರು.
ರೇಣುಕಾಚಾರ್ಯಗೆ ಸವದಿ ಟಾಂಗ್ : ತನ್ನ ಸೋಲಿಗೆ ಯೋಗೇಶ್ವರ್ ಕಾರಣ ಎಂಬ ಹೆಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ವಿಶ್ವನಾಥ್ ಅನುಭವಿ ರಾಜಕಾರಣಿ, ಸಾಹಿತಿ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯೋಗೇಶ್ವರ್ಗೆ ಸಚಿವ ಸ್ಥಾನ ನೀಡೋದು ಸಿಎಂ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರ.
ಕೆಲವರು ತಮ್ಮ ಸಚಿವ ಸ್ಥಾನ ತಪ್ಪುತ್ತೆ ಅಂತಾ ಮತ್ತೊಬ್ಬರ ಸಚಿವ ಸ್ಥಾನಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸಾಮಾನ್ಯ ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಸವದಿ ಟಾಂಗ್ ಕೊಟ್ಟಿದ್ದಾರೆ.
ಶ್ರೀರಾಮುಲು ಹೇಳಿಕೆಗೆ ಸ್ಪಷ್ಟನೆ : ಮೊಳಕಾಲ್ಮುರು ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿಸುವ ಕುರಿತು ಸಚಿವ ಶ್ರೀರಾಮುಲು ಹೇಳಿಕೆ ನೀಡಿರುವು ಕುರಿತು ಸ್ಪಷ್ಟನೆ ನೀಡಿದ ಸವದಿ, ಅಲ್ಲಿನ ಜನ ಮನವಿ ಕೊಟ್ಟಿದ್ದಾರೆ.
ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತಮ್ಮ ಕ್ಷೇತ್ರವನ್ನೂ ಸೇರಿಸುವಂತೆ ಕೇಳಿ ಕೊಂಡಿದ್ದಾರೆ. ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಅಷ್ಟೇ.. ಆದರೆ, ಮೊಳಕಾಲ್ಮುರು ಕ್ಷೇತ್ರವನ್ನು 371(ಜೆ) ವ್ಯಾಪ್ತಿಗೆ ಸೇರಿಸೋದು ಅಷ್ಟು ಸುಲಭವಲ್ಲ.
ಅದು ನನ್ನ ಕೈಯಲ್ಲೂ ಇಲ್ಲ, ರಾಮುಲು ಕೈನಲ್ಲೂ ಇಲ್ಲ. ಕೇಂದ್ರ ಸರ್ಕಾರ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದೆ ಮೊಳಕಾಲ್ಮುರು ಸೇರಿಸೋ ವಿಚಾರವೇ ಇಲ್ಲ ಎಂದರು.