ಕಲಬುರಗಿ: ಕರ್ನಾಟಕ ತೆಲಂಗಾಣ ಜನರ ಆರಾಧ್ಯ ದೈವ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಆರತಿ ತಟ್ಟೆಯಲ್ಲಿ ಬರುವ ಕಾಣಿಕೆ ಹಣಕ್ಕಾಗಿ ಮೂಲ ಅರ್ಚಕರು ಹಾಗೂ ಮುಜರಾಯಿ ಅರ್ಚಕರ ಕಿತ್ತಾಡಿಕೊಂಡಿದ್ದಾರೆ.

ಕಾಳಗಿ ತಾಲೂಕಿನ ರಟಕಲ್ ಶ್ರೀ ರೇವಣ್ಣಸಿದ್ದೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳಲ್ಲಿ ಒಂದಾಗಿದೆ. ರಾಜ್ಯ ಹೊರರಾಜ್ಯಗಳಲ್ಲಿ ಅಪಾರ ಭಕ್ತರನ್ನು ಹೊಂದಿದೆ. ದೇಗುಲಕ್ಕೆ ಬರುವ ಭಕ್ತರು ಆರತಿ ತಟ್ಟೆಗೆ ದಕ್ಷಿಣೆ ಹಾಕುತ್ತಾರೆ. ಆದರೆ ಈ ಹಣಕ್ಕಾಗಿ ಅರ್ಚಕರು ಕಿತ್ತಾಡಿಕೊಳ್ಳುತ್ತಿದ್ದಾರೆ.

ಮೂಲ ಸಂಸ್ಥಾನಿಕ ಅರ್ಚಕರು ನಾವೇ ಎನ್ನುತ್ತಿರುವ ಚನ್ನಬಸಪ್ಪ, ಮಲ್ಲಿಕಾರ್ಜುನ, ಸೋಮನಾಥ, ರೇವಣಸಿದ್ದಪ್ಪ ಹಾಗೂ ಗಿರೀಶ್ ಎಂಬುವವರು ದೇವಸ್ಥಾನ ನಮಗೆ ಸೇರಿದೆ, ನಾವು ಐದು ಜನ ಅರ್ಚಕರು ಮಾತ್ರ ದೇವಸ್ಥಾನದ ಪೂಜೆ ಸೇರಿ ಸಕಲ ಕಾರ್ಯ ನೋಡಿಕೊಂಡು ಹೋಗುತ್ತಿದ್ದೇವೆ. ಆದರೆ, ಇತ್ತೀಚೆಗೆ ಮುಜರಾಯಿ ಇಲಾಖೆ ನೇಮಿಸಿದ ಕೆಲ ಅರ್ಚಕರು ನಮ್ಮ ಕೈಯಲ್ಲಿ ಕಲಿತು ಈಗ ನಮಗೆ ತಿರುಗಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ 'ಟೆಂಟ್ ಟೂರಿಸಂ': ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ
ಆದರೆ, ಮುಜರಾಯಿ ಇಲಾಖೆ ಅರ್ಚಕರು ಹೇಳುವ ಪ್ರಕಾರ, ಇವರು ಸಂಸ್ಥಾನಿಕ ಅರ್ಚಕರು ಅಂತ ನಕಲಿ ದಾಖಲಾತಿ ನೀಡಿದ್ದಾರೆ. ಸೇಡಂ ಸಹಾಯಕ ಆಯುಕ್ತರು ತನಿಖೆ ನಡೆಸಿದಾಗ ನಕಲಿ ದಾಖಲಾತಿ ನೀಡಿರುವುದು ಸ್ಪಷ್ಟವಾಗಿದೆ. ಅಲ್ಲದೇ ಈ ಹಿಂದೆ ದೇವಸ್ಥಾನದಿಂದ ತೆಗೆದುಕೊಂಡು ಹೋದ ವಸ್ತುಗಳು ಮರಳಿ ಕೊಡಬೇಕು, ಇಲ್ಲದಿದ್ದರೆ ದೂರು ದಾಖಲು ಮಾಡುವುದಾಗಿ ಚನ್ನಬಸಪ್ಪ ಅವರಿಗೆ ಎಚ್ಚರಿಕೆ ಕೂಡಾ ನೀಡಲಾಗಿದೆ ಎಂದು ಮುಜರಾಯಿ ಅರ್ಚಕ ಓಂಪ್ರಕಾಶ್ ಹೇಳಿದ್ದಾರೆ.