ಕಲಬುರಗಿ: ಹೆಮ್ಮಾರಿ ಕೊರೊನಾದಿಂದಾಗಿ ಶಾಲೆಗಳಿಗೆ ಬೀಗ ಬಿದ್ದಿದ್ದು, ಗ್ರಾಮೀಣ ಭಾಗದ ಮಕ್ಕಳು ತಾವು ಕಲಿಯುವ ಶಾಲೆಯ ಆವರಣದಲ್ಲಿಯೇ ದನ ಮೇಯಿಸಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಮಕ್ಕಳು ದನ ಮೇಯಿಸುತ್ತಿದ್ದಾರೆ. ಶಾಲೆ ಬಂದ್ ಮಾಡಿ ಒಂದೂವರೆ ವರ್ಷ ಕಳೆದಿದೆ. ಪಾಠಪ್ರವಚನ ಕೇಳಿಸಬೇಕಾದ ಶಾಲೆಯ ಕೋಣೆಗಳಲ್ಲಿ ಈಗ ಮದ್ಯದ ಬಾಟಲಿಗಳ ಸದ್ದು ಕೇಳುತ್ತಿದೆ. ಶಾಲೆಯ ಅಂಗಳದಲ್ಲಿ ಬೀಡಾಡಿ ದನಗಳದ್ದೇ ಕಾರು ಬಾರಾಗಿದೆ. ಸಮರ್ಪಕವಾದ ಕಾಂಪೌಂಡ್ ಸೌಲಭ್ಯವಿಲ್ಲದ ಕಾರಣ ಶಾಲೆ ಆವರಣದಲ್ಲಿ ಹಸುಗಳು ಬಂದು ಮೇಯುತ್ತಿವೆ. ಶಾಲೆಯ ತರಗತಿ ಕೋಣೆಗಳು ಪುಂಡರ ಅಡ್ಡವಾಗಿ ಮಾರ್ಪಟ್ಟಿವೆ.
ಶಾಲೆಯ ಅಂಗಳದಲ್ಲಿ ಹುಲ್ಲು ಮುಳ್ಳುಕಂಟಿ ಬೆಳೆದಿದೆ. ಊರಿನ ಪುಂಡ ಹುಡುಗರೆಲ್ಲ ಸಂಜೆಯಾಗುತ್ತಿದ್ದಂತೆ ಶಾಲೆಗೆ ನುಗ್ಗುತ್ತಾರೆ. ಮದ್ಯ ಕುಡಿದು ಬಾಟಲು ಬೀಸಾಡುತ್ತಾರೆ. ಪರಿಣಾಮ ಇಡೀ ಶಾಲಾ ಆವರಣದಲ್ಲಿ ಗಾಜುಗಳು ಹರಡಿಕೊಂಡಿವೆ. ಕಾಂಪೌಂಡ್ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು, ದನಕರುಗಳು ಸೀದಾ ಶಾಲೆ ಆವರಣದೊಳಗೆ ನುಗ್ಗುತ್ತಿವೆ. ಹೀಗಾಗಿ ಶೀಘ್ರವೇ ಶಾಲೆಗೆ ಸೂಕ್ತ ಕಾಂಪೌಂಡ್ ವ್ಯವಸ್ಥೆಯಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಕೇಸಬಳ್ಳಿ ಆಗ್ರಹಿಸಿದ್ದಾರೆ.
ಸರ್ಕಾರವೇನೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕೊರೊನಾದಿಂದ ಶಾಲೆಗಳು ಮುಚ್ಚಿದ್ದು, ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ದುಡಿಯಲು, ದನ ಮೇಯಿಸಲು ಕಳುಹಿಸುತ್ತಿವೆ. ಸರ್ಕಾರ ಈ ಬಗ್ಗೆ ಸಹ ಗಮನ ಹರಿಸುವ ಅನಿವಾರ್ಯತೆ ಇದೆ.