ಗಂಗಾವತಿ: ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ವಿಮರ್ಶೆ ಮಾಡಿ ಫೇಸ್ಬುಕ್ ಖಾತೆಗೆ ಸಂದೇಶ ಹಾಕಿದ್ದಕ್ಕೆ ಕೆಲ ಯುವಕರು ಕೈ ನಾಯಕಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಈ ವಿಚಾರವಾಗಿ ಅವರು ನಗರ ಠಾಣೆಯಲ್ಲಿ ಯುವಕರ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆಪ್ತ ಬೆಂಬಲಿಗರಾಗಿರುವ ಎಚ್.ಎಂ.ಶೈಲಜಾ ಸಾಮಾಜಿಕ ಅಭಿವೃದ್ಧಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ಮಾಡುವ ಹವ್ಯಾಸ ಹೊಂದಿದ್ದಾರೆ. ಇದರ ಭಾಗವಾಗಿ ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದನ್ನು ಗಮನಿಸಿದ ಭೀಮನಗೌಡ ಬಿರಾದಾರ್, ಯುವರಾಜ ರೆಡ್ಡಿ, ರಂಜಿತ್ ಭಂಡಾರಿ ಕೇದಿಲಾ, ರಾಜೇಶ ರಾಜಿ, ಜಯರಾಮ್ ಶ್ರೀನಿವಾಸ, ವಿರುಪಾಕ್ಷಿ ಐಜಿ ಹಾಗೂ ಸತೀಶ್ ಗೌಡ ಎಂಬುವವರು ಶೈಲಜಾ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.