ರಾಣೆಬೆನ್ನೂರು: ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿ ಆಯ್ಕೆಯಾಗಿದ್ದರೂ ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳ ಅಧಿಕಾರ ಕಾಂಗ್ರೆಸ್ ಪಾಲಾಗಿದೆ.
ಡಿ.22 ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೆಡ್ಲೇರಿ ಮತ್ತು ಕರೂರು ಗ್ರಾಮ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಮತ್ತು ಅಧಿಕಾರ ಕೈ ತಪ್ಪಿರುವುದು ಮೀಸಲಾತಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.
ಮೆಡ್ಲೇರಿ ಗ್ರಾಮ ಪಂಚಾಯಿತಿ 25 ಸದಸ್ಯರನ್ನು ಹೊಂದಿದ್ದು, ಬಿಜೆಪಿ ಬೆಂಬಲಿತ 16, ಕಾಂಗ್ರೆಸ್ ಬೆಂಬಲಿತ 3 ಮತ್ತು ಪಕ್ಷೇತರರಾಗಿ 3 ಜನ ಆಯ್ಕೆಯಾಗಿದ್ದಾರೆ. ಆದರೆ ಜ.15 ರಂದು ನಡೆದ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಆದರೆ ಎಸ್ಟಿ ಮೀಸಲಾತಿ ಹೊಂದಿರುವ 6ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಶಾಂತವ್ವ ತಳವಾರ ಆಯ್ಕೆಯಾದ ಕಾರಣ ಅಧ್ಯಕ್ಷ ಸ್ಥಾನ ಅವರ ಪಾಲಾಗಲಿದೆ.
ಇನ್ನೂ ಕರೂರು ಗ್ರಾಮ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿ ಆಯ್ಕೆಯಾಗಿದ್ದರು. ಆದರೆ ಇಲ್ಲಿಯೂ ಸಹ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧಿಕಾರ ಹಿಡಿಯಲಿದ್ದಾರೆ. ಒಟ್ಟು 18 ಸದಸ್ಯರು ಹೊಂದಿರುವ ಗ್ರಾ.ಪಂ 11 ಜನ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾದರೆ 7 ಜನ ಕಾಂಗ್ರೆಸ್ ಬೆಂಬಲಿತ ಆಯ್ಕೆಯಾಗಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿರುವ ನೀಲಮ್ಮ ಮಾಲತೇಶ ಪೂಜಾರ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಓದಿ : ಶಿವಮೊಗ್ಗದಲ್ಲಿ ಶಿವಾ..ಶಿವಾ.. ಬೃಹತ್ ಜಿಲೆಟಿನ್ ಸ್ಫೋಟಕ್ಕೆ ಬೆಚ್ಚಿಬಿದ್ದ ಮಲೆನಾಡು!
ಈ ಗ್ರಾ.ಪಂ.ಯಲ್ಲಿ ಕಾಂಗ್ರೆಸ್ದೆ ದರ್ಬಾರ : 1992 ರಲ್ಲಿ ಮಂಡಲ ಪಂಚಾಯಿತಿಯಿಂದ ಮೇಲ್ದರ್ಜೆಗೆ ಏರಿದ ಮೆಡ್ಲೇರಿ ಗ್ರಾ.ಪಂ. ಈವರೆಗೂ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರವಿದ್ದಾಗ ಒಂದು ಬಾರಿ ಮಾತ್ರ ಮೆಡ್ಲೇರಿ ಗ್ರಾ.ಪಂ ಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಅಧಿಕಾರ ಹಿಡಿದಿದ್ದರು. ಅದನ್ನು ಹೊರತು ಪಡಿಸಿದರೆ, ಈವರೆಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಅಧಿಕಾರ ನಡೆಸುತ್ತ ಬಂದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಕೇವಲ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ 16 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೂ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿ ತಪ್ಪಿ ಹೋಗಿದ್ದು, ಕಾಂಗ್ರೆಸ್ ಪಾಲಾಗಿದೆ.
ಅಧ್ಯಕ್ಷ ಸ್ಥಾನ ಸಿಕ್ಕ ದಿನವೆ ಗಂಡನನ್ನು ಕಳೆದುಕೊಂಡ ಶಾಂತವ್ವ: ಜ. 15ರಂದು ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಶಾಂತವ್ವಳ ಕುಟುಂಬದವರು ಸಂಭ್ರಮಿಸಿದರು. ಆದರೆ ಶಾಂತವ್ವಳ ದುರಾದೃಷ್ಟವೆಂದರೆ ಅದೇ ದಿನ ರಾತ್ರಿ ಪತಿ ನಾಗಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಶಾಂತವ್ವ ಅವರಿಗೆ ಒಂದೆಡೆ ಅಧ್ಯಕ್ಷ ಸ್ಥಾನ ಸಂತಸ ತಂದುಕೊಟ್ಟಿದ್ದರೆ, ಮತ್ತೊಂದೆಡೆ ಪತಿಯ ಸಾವು ಮರೆಯಲಾಗದ ನೋವು ಕೊಟ್ಟಿತ್ತು.