ಹಾವೇರಿ: ಬಿಜೆಪಿ ಮತ್ತು ಆರ್ಎಸ್ಎಸ್ ದೆಹಲಿಯ ಕೆಂಪುಕೋಟೆ ಮೇಲಿನ ತಿರಂಗಾ ಇಳಿಸಿ ಕೆಂಪು ಧ್ವಜ ಹಾರಿಸುವ ಉದ್ದೇಶವಿಟ್ಟುಕೊಂಡಿವೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಹರಿಹಾಯ್ದಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ದೇಶದ ಏಕತೆಗಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನ ಉಳಿಸಲು, ಭಾರತ ಸಂವಿಧಾನ ರಕ್ಷಣೆಗಾಗಿ, ಬಡವರ ಏಳಿಗೆಗಾಗಿ, ಬಿಜೆಪಿಯನ್ನು ಓಡಿಸಬೇಕು ಎಂದು ಕೋಳಿವಾಡ ಹೇಳಿದರು.
2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು. ದೇಶದಲ್ಲಿ ಬಿಜೆಪಿ ಸರ್ಕಾರ ಬಂದು ಎಂಟು ವರ್ಷಗಳಾಗಿದೆ. ಈ ಸರ್ಕಾರ ಬಡವರನ್ನು ಬಡವರನ್ನಾಗಿಯೇ ಮಾಡುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಆರ್ಎಸ್ಎಸ್ಗೆ ಈಗ ಭಾರತ ಧ್ವಜ ನೆನಪಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಹರ ಘರ್ ತಿರಂಗಾ ಬಿಜೆಪಿಯ ನಾಟಕ. ಕಾಂಗ್ರೆಸ್ ಭಾರತ ದೇಶದ ಧ್ವಜವನ್ನು ದೇವರಂತೆ ನೋಡಿಕೊಂಡಿದೆ. ಮಹಾತ್ಮ ಗಾಂಧಿಜಿಯವರು ನೇಕಾರರ ಖಾದಿಯಿಂದ ಮಾಡಿದ ಧ್ವಜ ಆಯ್ಕೆ ಮಾಡಿದ್ದರು. ಆದರೆ ಬಿಜೆಪಿಯವರು ಖಾದಿಯಿಂದ ನೇಯ್ದ ತಿರಂಗಾ ಬಿಟ್ಟು ಪಾಲಿಸ್ಟರ್ ಧ್ವಜ ಹಾರಿಸುತ್ತಿದ್ದಾರೆ. ಬಿಜೆಪಿಯವರು ಗಾಂಧೀಜಿ ಕನಸನ್ನು ಈ ಮೂಲಕ ಮಣ್ಣುಪಾಲು ಮಾಡಿದ್ದಾರೆ.
ಹರ ಘರ್ ತಿರಂಗಾ ಕಾರ್ಯಕ್ರಮದ ಮೂಲಕ ಧ್ವಜ ಮಾರಾಟ ಮಾಡುತ್ತಿದ್ದಾರೆ. ಇಂತಹ ನಾಚಿಕೆಗೇಡು ಬಿಜೆಪಿ ಸರ್ಕಾರವನ್ನು ಜನರು ಓಡಿಸಬೇಕು ಎಂದು ಕಿಡಿಕಾರಿದರು.
ಇದೇ ವೇಳೆ ಎಸಿಬಿ ರದ್ದತಿ ತೀರ್ಪನ್ನು ತಾವು ಸ್ವಾಗತಿಸುವದಾಗಿ ಕೋಳಿವಾಡ್ ತಿಳಿಸಿದ್ದು, ರಾಜ್ಯ ಸರ್ಕಾರ ಎಸಿಬಿಯನ್ನು ನಾಲ್ಕು ವರ್ಷದಿಂದ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ನಾಲಿಗೆಯಲ್ಲೇ ಹೊಲಸು ತುಂಬಿಕೊಂಡಿದೆ: ಛಲವಾದಿ ನಾರಾಯಣಸ್ವಾಮಿ