ಹವೇರಿ: ಕಳೆದ ವರ್ಷದಂತೆ ಈ ವರ್ಷವೂ ಕೂಡ ಚೀನಾದಿಂದ ರೋಗಾಣುಯುಕ್ತ ಬಿತ್ತನೆ ಬೀಜಗಳು ಬರುವ ಆತಂಕ ಜನರಲ್ಲಿದೆ. ಚೀನಾದ ಯಾವುದೇ ಕಂಪನಿಯ ಬಿತ್ತನೆ ಬೀಜ ಮನೆಗೆ ಬಂದರೆ, ರೈತರು ಬಿತ್ತನೆ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚೀನಾ ಕಂಪನಿಯ ಬಿತ್ತನೆ ಬೀಜಗಳು ಬಂದರೆ ಪೊಲೀಸ್ ಠಾಣೆಗೆ ಅಥವಾ ಕೃಷಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುವಂತೆ ತಿಳಿಸಿದರು. ಕಳೆದ ವರ್ಷ ಸಹ ಈ ಕುರಿತು ಸಮಾಚಾರ ಬಂದಿತ್ತು ಆದರೆ, ಬಿತ್ತನೆ ಬೀಜ ಬಂದಿರಲಿಲ್ಲ. ಇಂತಹ ಬೀಜಗಳನ್ನು ಜಮೀನಿನಲ್ಲಿ ಬಿತ್ತಿದರೆ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಅಲ್ಲದೇ ಹಲವು ಸಮಸ್ಯೆಗಳನ್ನು ರೈತರು ಎದುರಿಸಬೇಕಾಗುತ್ತದೆ ಎಂದು ಬಿ.ಸಿ. ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಈ ಕುರಿತಂತೆ ಸಿ.ಎಂ. ಯಡಿಯೂರಪ್ಪ ಯಾವುದೇ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಂಡಿರುವುದಾಗಿ ಪಾಟೀಲ್ ಹೇಳಿದರು.
ಈ ಕುರಿತಂತೆ ಕೇಂದ್ರ ಸರ್ಕಾರ ಸಚಿವರ ಜೊತೆ ಮಾತುಕತೆ ನಡೆಸಿದ್ದು ರಾಜ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜ ಬಿತ್ತಿ ಅದರಿಂದ ನಷ್ಟವಾದರೇ ಕೃಷಿ ಇಲಾಖೆ ಅದಕ್ಕೆ ಜವಾಬ್ದಾರಿ ಅಲ್ಲ. ರೈತರು ಸರ್ಕಾರ ಗುರುತಿಸಿದ ಬಿತ್ತನೆ ಬೀಜಗಳನ್ನು ಮಾತ್ರ ಖರೀದಿಸಬೇಕು ಎಂದರು.