ಹಾಸನ: ''ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಬಿಜೆಪಿ ಸರ್ಕಾರ ರದ್ದು ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಮಾಡಿರುವುದಕ್ಕೆ ಸ್ವಾಗತಿಸುತ್ತೇವೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ'' ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದರು. ''ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಸಾಕಷ್ಟು ಜಾತಿಗಳಿಗೆ ಮೀಸಲಾತಿ ಇರಲಿಲ್ಲ. ಅವರು ಜನರಲ್ನಲ್ಲಿ ಹೋರಾಟ ಮಾಡಬೇಕಿತ್ತು. ಈ ವೇಳೆ, ದೇವೇಗೌಡರು ಬರಲಾಗಿ 108 ಜಾತಿಗಳಿಗೆ ಮೀಸಲಾತಿ ಸಿಕ್ಕಿತು. ಮೀಸಲಾತಿ ಇಲ್ಲದೇ ಇದ್ದಾಗ ಶೇ.4ರಷ್ಟು ಮುಸ್ಲಿಮರಿಗೆ ಶೇ. 18 ರಷ್ಟು ಹಿಂದುಳಿದವರಿಗೆ ಕೊಟ್ಟಿದ್ದು ದೇವೇಗೌಡರು. ಎಸ್ಟಿ ಸಮಾಜಕ್ಕೆ ಚಂದ್ರಶೇಖರ್ ಪಿಎಂ ಇರುವಾಗ ಹೋರಾಟ ಮಾಡಿಸಿದರು. ಮುಸ್ಲಿಮರು ಬಿಜೆಪಿಗೆ ಮತ ಕೊಡುವುದಿಲ್ಲ ಎಂದು ಮೀಸಲಾತಿ ರದ್ದು ಮಾಡಿದ್ರು. ಮೊದಲು ಬಿಜೆಪಿ ತೊಲಗಿಸಿ ಎಂದು ನಾನು ಮುಸ್ಲಿಮರಿಗೆ ಕೇಳಿಕೊಳ್ಳುತ್ತೇನೆ. ಬಿಜೆಪಿ ಕಾಂಗ್ರೆಸ್ ನಡುವೆ ಅಡ್ಜೆಸ್ಡಮೆಂಟ್ ಇದ್ದು, ಅದನ್ನು ಬಿಟ್ಟು ನೀವು ಜೆಡಿಎಸ್ಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ ಎಂದರು. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು ಆದೇಶಕ್ಕೆ ತಡೆ ಮಾಡಿರುವುದಕ್ಕೆ ಸ್ವಾಗತಿಸುತ್ತೇವೆ'' ಎಂದು ಅವರು ಹೇಳಿದರು.
ಬಿಜೆಪಿ ನಾಯಕರ ವಿರುದ್ದ ರೇವಣ್ಣ ಗರಂ: ''ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಗಾಂಧೀಜಿಯವರ ಆಸೆ ಈಡೇರಿಸಬೇಕು. ದೇವೇಗೌಡರು ಮೀಸಲಾತಿ ಇಲ್ಲದಿದ್ದಾಗ ಹಿಂದುಳಿದ ಜಾತಿಗೆ ಅವಕಾಶ ನೀಡಿದ್ರು. ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗೋದು ದೇವೇಗೌಡರ ಗುರಿಯಾಗಿತ್ತು. ಹಾಗಾಗಿ ದೇವೇಗೌಡರು 60ವರ್ಷಗಳ ಕಾಲ ರಾಜಕೀಯದ ಅನುಭವವಿದೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಇದ್ದು ಪ್ರಧಾನಿಯನ್ನು ಪ್ರಚಾರಕ್ಕೆ ಕರೆಸುವ ಸ್ಥಿತಿ ಇದೆ ಎಂದರೆ, ನಾನು ಏನು ಹೇಳಲಿ? ನಡ್ಡಾ ಬರಬೇಕು, ಮೋದಿ ಬರಬೇಕು. ಅಂದರೆ ಇವರ ಮುಖ ನೋಡಿದ್ರೆ ಯಾರೂ ಓಟ್ ಹಾಕಲ್ಲಾ ಅಂತಾಯ್ತಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ರೇವಣ್ಣ ಕಿಡಿಕಾರಿದರು.
ಪ್ರೀತಂಗೌಡ ಜೊತೆ ನಾವಿದ್ದೇವೆ ಎಂಬ ಅಮಿತ್ ಶಾ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ''ಗೊತ್ತಿಲ್ಲಪ್ಪ, ನಾವ್ಯಾರಿಗೂ ಸವಾಲು ಹಾಕುವ ಪರಿಸ್ಥಿತಿಯಲ್ಲಿಲ್ಲ. ಅಮಿತ್ ಶಾ ಅವರು ತಿಳಿದುಕೊಳ್ಳಬೇಕು. ಐವತ್ತು 50ಸಾವಿರಕ್ಕಿಂತ ಒಂದು ಮತ ಕಡಿಮೆ ಆದರೆ, ರಾಜೀನಾಮೆ ಕೊಡ್ತೀನಿ ಅಂತ ಅವರು ಹೇಳಿರೋದು. ಅದಕ್ಕೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ನಿಲ್ಲಿಸಬೇಕು ಅಂತ ಕುಮಾರಣ್ಣ ಹೇಳಿದ್ರು. ಅದರಂತೆ ನಿಲ್ಸಿದ್ದೀವಿ'' ಎಂದು ಶಾಸಕ ಪ್ರೀತಂ ಹೇಳಿಕೆಗೆ ಟಾಂಗ್ ನೀಡಿದರು.
''ಬಂದು ಜಿಲ್ಲೆಗೆ ಐಐಟಿ ಕೊಡ್ತಿನಿ ಅಂತಾ ಘೋಷಣೆ ಮಾಡಿ ಹೋಗಲಿ, ಅದು ದೇವೇಗೌಡರ ಕನಸು ಆಗಿದೆ. ಈ ಬಗ್ಗೆ ಓರ್ವ ಮಾಜಿ ಪ್ರದಾನಿಯಾಗಿ ಜೀವಿತಾವಧಿಯಲ್ಲಿ ಇದೊಂದು ಮಾಡಿಕೊಡಿ ಎಂದು ಎಷ್ಟು ಸಲ ಕೇಳಿದರೂ ಅದನ್ನು ಧಾರವಾಡಕ್ಕೆ ಐಐಟಿ ತಗೊಂಡು ಹೋದ್ರು. ಅವರು ಐಐಟಿ ಕೇಳಿದ್ರಾ ಕೇಂದ್ರೀಯ ವಿವಿ ಕೇಳಿದ್ರಾ? ನಾನು ರೆಡಿ ಮಾಡಿದ್ದನ್ನು ತೆಗೆದುಕೊಂಡು ಹೋದ್ರು. ಈ ರಾಜ್ಯದಲ್ಲಿ ಯಾರು ಕೂಡ ಕೇಳಿರಲಿಲ್ಲ, ಅದಕ್ಕೆ ಬೇಕಾದ ಜಾಗವನ್ನು ರೆಡಿ ಮಾಡಿದ್ದೆವು. ಆದರೆ, ಈ ಎರಡೂ ರಾಷ್ಟ್ರೀಯ ಪಕ್ಷಗಳು ಅವಕಾಶ ನೀಡಲಿಲ್ಲ. ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸ್ವಲ್ಪ ಮನೆಯಲ್ಲಿ ಕೂರಿಸಿ ಎಂದು ರೇವಣ್ಣ ಮತದಾರರಿಗೆ ಕರೆ ನೀಡಿದರು. ಕಾಂಗ್ರೆಸ್ ನಾಯಕರೇ ಕೆಲವರು ಹೇಳ್ತಾರೆ ತಿಂದು ತೇಗೊವಷ್ಟು ದುಡ್ಡಿದೆ ಅಂತಾರೆ. ನಾನು ಯಾರ ಬಗ್ಗೆ ಟೀಕೆ ಮಾಡಲ್ಲ, ನಮ್ಮ ಜಿಲ್ಲೆಯ ಜನ ದೇವೇಗೌಡರನ್ನು ಇಷ್ಟು ಮಟ್ಟಕ್ಕೆ ಬೆಳೆಸಿದ್ದಾರೆ. ಇದೆಲ್ಲವನ್ನೂ ಜನರಿಗೆ ಬಿಡ್ತೇವೆ. ಈ ಎರಡು ಪಕ್ಷಗಳನ್ನು ದೂರ ಇಡಿ'' ಎಂದು ರೇವಣ್ಣ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಸಿ.ಟಿ. ರವಿ: ಸಮಾವೇಶದಲ್ಲಿ ಕೆ.ಎಸ್. ಈಶ್ವರಪ್ಪ ಘೋಷಣೆ