ಹಾಸನ: ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಕೊರೊನಾ ಪಾಸಿಟಿವ್ ಇದ್ದ ವಿದ್ಯಾರ್ಥಿ ಜೊತೆ ಕೂತು ಎಸ್ಸೆಸೆಲ್ಸಿ ಪರೀಕ್ಷೆ ಬರೆದು ಭೀತಿಯಲ್ಲಿದ್ದ ವಿದ್ಯಾರ್ಥಿಗಳ ಗಂಟಲು ದ್ರವದ ವರದಿ ನೆಗೆಟಿವ್ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದಲ್ಲಿ ಪಾಸಿಟಿವ್ ಇದ್ದ ವಿದ್ಯಾರ್ಥಿ ಜೊತೆ ಅದೇ ಕೊಠಡಿಯಲ್ಲಿ 18 ಸಹಪಾಠಿಗಳು ಪರೀಕ್ಷೆ ಬರೆದಿದ್ದರು. ಹೀಗಾಗಿ ಅವರ ಗಂಟಲು ದ್ರವ ಲ್ಯಾಬ್ಗೆ ಕಳುಹಿಸಲಾಗಿತ್ತು. ಮುಂದಿನ ಪರೀಕ್ಷೆ ಬರೆಯಬೇಕೋ ಅಥವಾ ಬೇಡವೇ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿತ್ತು.
ವಿದ್ಯಾರ್ಥಿಗೆ ಸೋಂಕು ತಗುಲಿದ ಹಿನ್ನೆಲೆ ಶಿಕ್ಷಣ ಸಚಿವರಿಗೆ ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು. ಅಂತರ್ಜಾಲ ಮುಖಾಂತರ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂಬ ಸೂಚನೆ ಮೇರೆಗೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದರ ಜೊತೆಗೆ ಈತನೊಂದಿಗೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ನೆಗೆಟಿವ್ ವರದಿ ಬಂದಿದ್ದು ಎಲ್ಲಾ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.