ಹಾಸನ: ಸಕಲೇಶಪುರದಲ್ಲಿ ಆಗಂತುಕ ವ್ಯಕ್ತಿಗಳಿಬ್ಬರು ರೈಲ್ವೆ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಪ್ರಕರಣದ ಸುದ್ದಿಯನ್ನ ಇಂದು ಈಟಿವಿ ಭಾರತ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಸಂಬಂಧಪಟ್ಟ ಇಲಾಖೆ ಇಂದು ಮಧ್ಯಾಹ್ನದಿಂದಲೇ ಆಗಂತುಕರ ಬೇಟೆಗೆ ಕಾರ್ಯಚರಣೆಗೆ ಇಳಿದಿದೆ.
ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ ಸಮೀಪ 55ನೇ ಮೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈಲ್ವೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಆಗಂತುಕರಿಬ್ಬರು ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಇಬ್ಬರು ರೈಲ್ವೆ ಇಲಾಖೆ ಸಿಬ್ಬಂದಿ ತಮ್ಮ ಮೇಲಿನ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ವರದಿ ನೀಡಿದ್ದರು. ಈ ಸಂಬಂಧ ಈಟಿವಿ ಭಾರತ ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಇದರಿಂದ ಜಾಗೃತಗೊಂಡ ರೈಲ್ವೆ ಪೊಲೀಸ್, ನಾಗರಿಕ ಪೊಲೀಸ್, ಅರಣ್ಯ ಇಲಾಖೆ ಮತ್ತು ಡಿ.ಸ್ವಾಟ್ ತಂಡಗಳು ಕಾರ್ಯಾಚರಣೆ ಮಾಡುತ್ತಿದ್ದು, ಆಗಂತುಕ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ನಾಲ್ಕು ತಂಡಗಳಲ್ಲಿ ಒಟ್ಟು 30ರಿಂದ 35 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ನಡುವಿನ 55ನೇ ಮೈಲಿಯಿಂದ ಪ್ರಾರಂಭವಾದ ಕಾರ್ಯಾಚರಣೆ ಶಿರವಾಗಲು, ಹೊಂಗಡಹಳ್ಳ, ಮಾರುತಿ ಪವರ್ ಜನ್, ಕಾಗಿನಹರೆ ಭಾಗಗಳಲ್ಲಿ ನಡೆಯುತ್ತಿದೆ. ಪೊಲೀಸರ ಮೂಲಗಳ ಪ್ರಕಾರ ಮಾಹಿತಿ ತಿಳಿದ ತಕ್ಷಣ ನಾವು ನಕ್ಸಲ್ ಚಟುವಟಿಕೆ ಇರಬಹುದೆಂಬ ಅನುಮಾನದಿಂದ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದುವರೆಗೆ ನಮಗೆ ನಕ್ಸಲ್ ಚಟುವಟಿಕೆಗೆ ಸಂಬಂಧಪಟ್ಟಂತೆ ಯಾವುದೇ ಕರಪತ್ರವಾಗಲಿ ಅಥವಾ ನಕ್ಸಲ್ ಚಟುವಟಿಕೆಯ ಸಾಮಗ್ರಿಯಾಗಲೀ ಸಿಕ್ಕಿಲ್ಲ ಎಂದಿದ್ದಾರೆ.
2012ರಿಂದ ಇಲ್ಲಿವರೆಗೆ ಯಾವುದೇ ನಕ್ಸಲ್ ಚಟುವಟಿಕೆ ಈ ಭಾಗದಲ್ಲಿ ಕಾಣಸಿಗುವುದಿಲ್ಲ. ಹೀಗಾಗಿ ಬಹುಶಃ ಇದು ದರೋಡೆಕೋರರ ಕೃತ್ಯವಿರಬಹುದು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ. ಇನ್ನು ಸಕಲೇಶಪುರ ಭಾಗದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಗೆ ಬಂದಿರುವ ಬೇರೆ ರಾಜ್ಯದ ವ್ಯಕ್ತಿಗಳ ಫೋಟೋಗಳನ್ನು ಕೂಡ ಕಲೆಹಾಕುತ್ತಿದ್ದು, ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.