ಹಾಸನ: ಚಾಲಕನ ನಿಯಂತ್ರಣ ತಪ್ಪಿ ಶಿರಾಡಿಘಾಟ್ ಸಮೀಪ ಲಾರಿಯೊಂದು ಬಿದ್ದು ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಶನಿವಾರ ನಡೆದಿದೆ.
ಬೆಂಗಳೂರು ಕಡೆಯಿಂದ ಮಂಗಳೂರಿಗೆ ಹೊರಟಿದ್ದ ಬೃಹತ್ ಲಾರಿಯೊಂದು ಶಿರಾಡಿಘಾಟ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಒಂದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಬೃಹತ್ ಕೈಗಾರಿಕೆಗೆ ಬಳಸುವ ಬಾಯ್ಲರ್ ರೀತಿಯ ಕಬ್ಬಿಣದ ಪೈಪನ್ನು ಲಾರಿಯ ಮೂಲಕ ಸಾಗಿಸಲಾಗುತ್ತಿತ್ತು. ಇಳಿಜಾರು ಪ್ರದೇಶವಾಗಿರುವುದರಿಂದ, ಜೊತೆಗೆ ಕಬ್ಬಿಣದ ಪೈಪು ಭಾರವಿದ್ದ ಹಿನ್ನೆಲೆ ಎಡಭಾಗಕ್ಕೆ ತೂಕ ಹೆಚ್ಚಾಗಿ ಲಾರಿ ತಿರುವಿನಲ್ಲಿ ಮಗುಚಿ ಬಿದ್ದಿದೆ.
ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಸಂಚಾರ ದಟ್ಟಣೆ ತಗ್ಗಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.