ಹಾಸನ : ಜಿಲ್ಲೆಯಲ್ಲಿ ನಿತ್ಯ ಒಂದಿಲ್ಲೊಂದು ಅಪರಾಧ ಪ್ರಕರಣ ಹೆಚ್ಚುತ್ತಲೇ ಇವೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಫುಲ್ ಅಲರ್ಟ್ ಆಗಿರೋ ಪೊಲೀಸರು ಪುಂಡರಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದ ಬಸಟ್ಟಿಕೊಪ್ಪಲು ಸರ್ಕ್ಲ್ ಪುಂಡರ ಹಾಟ್ಸ್ಟಾಟ್ ಆಗಿದೆ. ಕುಡಿದ ಮತ್ತಿನಲ್ಲಿ ಯುವಕರು ಒಂದಿಲ್ಲೊಂದು ವಿಚಾರಕ್ಕೆ ಗಲಾಟೆ ಗದ್ದಲಗಳನ್ನು ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಇದೇ ಸರ್ಕಲ್ ಬಳಿಯ ನಕ್ಷತ್ರ ಹೋಟೆಲ್ ಎದುರು ಗಲಾಟೆ ಮಾಡುತ್ತಿದ್ದ ಪುಂಡರನ್ನು ಪೊಲೀಸರು ಬಂದು ರೇಡ್ ಮಾಡಿ ಲಾಠಿ ರುಚಿ ತೋರಿಸಿ ಠಾಣೆಗೆ ಎಳೆದೊಯ್ದಿದ್ದರು.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಪುಂಡರು ಇಂದು ಸಹ ಸಂಜೆ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೊಡೆದಾಡಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ವೃತ್ತ ನಿರೀಕ್ಷಕ ಕೃಷ್ಣಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಗಲಾಟೆ ಮಾಡುತ್ತಿದ್ದ ಪುಂಡರು ಪೊಲೀಸರನ್ನು ನೋಡಿ ಸ್ಥಳದಿಂದ ಪರಾರಿಯಾದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದಲ್ಲಿ ನಿಂತಿದ್ದ ಎಲ್ಲಾ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿ ಅಕ್ಕಪಕ್ಕದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡದ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.