ಹಾಸನ: ಮಲೆನಾಡು ಭಾಗಗಳಲ್ಲಿ ಕಾಡಾನೆ ಸಮಸ್ಯೆಯಿದೆ. ಕಾಡಾನೆ ಸಮಸ್ಯೆಯಾಗಲಿ, ಕಾಡಿನ ಗಂಧಗಾಳಿಯಾಗಲಿ ಗೊತ್ತಿಲ್ಲದ ಆನಂದ್ ಸಿಂಗ್ ಎಂಬುವವರಿಗೆ ಅರಣ್ಯ ಖಾತೆ ನೀಡಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ವಿವಿಧ ಸಂಘಟನೆಗಳ ಸಹಕಾರದಿಂದ ಮತ್ತೊಮ್ಮೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಗೋಪಿನಾಥ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳಿಂದ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಕಾಡಾನೆ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಕಾಡಾನೆ ದಾಳಿಯಿಂದ ಈವರೆಗೆ 41 ಜನರು ಪ್ರಾಣ ಕಳೆದುಕೊಂಡಿದ್ದು, ಕೋಟ್ಯಂತರ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. ಆದರೆ, ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರವೂ ಸಮಯಕ್ಕೆ ಸರಿಯಾಗಿ ಸಿಗದೇ, ಕಚೇರಿಗಳನ್ನು ಅಲೆಯುವ ಸ್ಥಿತಿ ಇದೆ ಎಂದು ಅಸಮಾಧಾನ ಹೊರಹಾಕಿದ್ರು.
ಮಲೆನಾಡು ಭಾಗದಲ್ಲಿ ಅಂದಾಜು 70 ಕಾಡಾನೆಗಳಿವೆ. ಪ್ರಸ್ತುತ ಒಂದು ಪುಂಡಾನೆ ಸೆರೆಗೆ ಮತ್ತು ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಒಂದು ಆನೆ ಸ್ಥಳಾಂತರಕ್ಕೆ ಸುಮಾರು 20 ಲಕ್ಷ ಖರ್ಚು ಆಗಲಿದೆ. ಆದ್ರೆ ಆನೆ ಸ್ಥಳಾಂತರ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಈ ಸುದ್ದಿಯನ್ನೂ ಓದಿ: ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಂತು ಕಡವೆ ಹಿಂಡು
ಕಾಡಾನೆ ಸಮಸ್ಯೆ, ಅರಣ್ಯದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಆನಂದ್ ಸಿಂಗ್ ಎಂಬುವರಿಗೆ ಅರಣ್ಯ ಖಾತೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಆಲೂರಿನಲ್ಲಿ ರೈತ ಹಾಗೂ ಅರೇಹಳ್ಳಿ ಸಮೀಪ ಸಾಲ್ಡನ್ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟರೂ ಅರಣ್ಯ ಸಚಿವರು ಪ್ರತಿಕ್ರಿಯೆ ನೀಡಲಿಲ್ಲ ಎಂದು ಆರೋಪಿಸಿದ್ರು.
ಇನ್ನು ಕಾಡಾನೆ ಸಮಸ್ಯೆಯಿಂದ ಮಲೆನಾಡು ಭಾಗದ ರೈತರು ಬೇಸತ್ತು ಹೋಗಿದ್ದಾರೆ. ಬಹುತೇಕ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರು ಬಾರದೆ ತೋಟ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ. ಹಾಗಾಗಿ ಬಹಳಷ್ಟು ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಹಗಲು ಹೊತ್ತಿನಲ್ಲಿಯೂ ಓಡಾಡಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದರೆ ಆ ಭಾಗದ ರೈತರ ಜಮೀನನ್ನು ಎಕರೆಗೆ 60 ಲಕ್ಷಕ್ಕೆ ಮಾರಾಟ ಮಾಡಲು ಸಿದ್ಧರಿದ್ದು, ಸರ್ಕಾರ ಖರೀದಿ ಮಾಡಿಕೊಂಡರೆ ಅಲ್ಲಿಂದ ಬೇರೆಡೆಗೆ ಹೋಗಿ ಜೀವನ ನಡೆಸಲಿದ್ದಾರೆ ಎಂದರು.