ಅರಕಲಗೂಡು : ಕೊಣನೂರಿನಲ್ಲಿ ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆ, ಗಾಳಿ ಹೊಡೆತಕ್ಕೆ ರೈತರು ಬೆಳೆದ ಬೆಳೆಗಳು ನೆಲಕಚ್ಚಿವೆ. ಮನೆ ಗೋಡೆಗಳು ಕುಸಿದು ಹಾನಿಗೀಡಾಗಿವೆ.
ರಾಮನಾಥಪುರ ಹೋಬಳಿಯ ಕುಟುಕುಮಂಟಿ ಕಾವಲು ಗ್ರಾಮದ ಮುತ್ತುಶೆಟ್ಟಿ ಮತ್ತು ಶೇಖರ ಶೆಟ್ಟಿ ಎಂಬುವರಿಗೆ ಸೇರಿದ ಮನೆಗಳು ಸಂಪೂರ್ಣ ಕುಸಿದಿವೆ. ಆಶ್ರಯಕ್ಕಾಗಿ ಪರದಾಡುವಂತಾಗಿದೆ. ಎರಡು ಮನೆಗಳಲ್ಲಿಯೂ ವೃದ್ಧರು ಹಾಗೂ ಪುಟ್ಟ ಮಕ್ಕಳಿವೆ. ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ. ತಾಲೂಕು ಹಾಗೂ ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮುತ್ತುಶೆಟ್ಟಿ ಆಗ್ರಹಿಸಿದ್ದಾರೆ.
ತಂಬಾಕು ಬೆಳೆಗಳು ಜಲಾವೃತ : ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಹೊಗೆಸೊಪ್ಪು ಬೆಳೆ ನೀರಲ್ಲಿ ಮುಳುಗಿ ಕೊಳೆಯುತ್ತಿದೆ. ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿ ಕಣ್ಣೀರಿಡುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸಿ ಸ್ವಾಮಿ, ಗ್ರಾಮಲೆಕ್ಕಿಗ ಮಧು ಕಾರ್ತಿಕ್, ಗ್ರಾಮ ಸಹಾಯಕ ರಾಜಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.