ಹಾಸನ : ನಾನು ಕಳೆದ 15 ದಿನಗಳಿಂದ ಹೇಳ್ತಾನೆ ಇದೀನಿ.. ನನ್ನ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಡಿಸಿ ಕೊಡುತ್ತಿಲ್ಲ. ಹಿಂಗಾದ್ರೆ, ನಮ್ಮ ಜನ ಸಾಯಲ್ವಾ?.
ನಮ್ಮ ಕ್ಷೇತ್ರಕ್ಕೆ ದುಡ್ಡು ಕೊಡಿಸಿ, ಇಲ್ಲ ಸಭೆಯನ್ನು ನೀವೇ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಭೆಯಿಂದ ಹೊರ ನಡೆಯಲು ಯತ್ನಿಸಿದ ಘಟನೆ ಹಾಸನದ ಹೊಯ್ಸಳ ಸಭಾಂಗಣದಲ್ಲಿ ನಡೆಯಿತು.
ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಜನ ಸಾಯ್ತಿದ್ದಾರೆ. ಆದರೆ, ಡಿಸಿಯವರು ಒಂದು ರೂ.ಹಣ ಬಿಡುಗಡೆ ಮಾಡುತ್ತಿಲ್ಲ. ನನಗೂ ಹೇಳಿ ಹೇಳಿ ಸಾಕಾಗಿದೆ. ಮುಖ್ಯಮಂತ್ರಿಯವರಿಗೆ ಮನೆ ಮುಂದೆ ಹೋಗಿ ಅಲ್ಲಿಯೇ ಡಿಸಿಯವರಿಗೆ ಸಿಎಂ ಫೋನ್ ಮಾಡಿದ್ದರು ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ.
ಮತ್ತೆ ನಾವ್ಯಾಕೆ ಶಾಸಕರಾಗಿ ನಮ್ಮ ಕ್ಷೇತ್ರದಲ್ಲಿ ಇರಬೇಕು. ಇವತ್ತಿನವರೆಗೆ ಒಂದು ಬಿಡಿಗಾಸು ಕೂಡ ಬಿಡುಗಡೆ ಮಾಡಿಲ್ಲ. ಇದರ ಜೊತೆಗೆ ಔಷಧಿಯು ಕೂಡ ಸರಿಯಾಗಿ ತಾಲೂಕಿಗೆ ತರಿಸಿಕೊಳ್ಳುತ್ತಿಲ್ಲ.
ಹೀಗಾದರೆ, ನಮ್ಮ ಜನರ ಪರಿಸ್ಥಿತಿ ಏನು? ಎಂದು ತಾವು ಕುಳಿತಿದ್ದ ಆಸನದಿಂದ ಎದ್ದು ಸಭೆಯಿಂದ ನಿರ್ಗಮಿಸುವ ಪ್ರಯತ್ನ ಮಾಡಿದ್ರು. ರೇವಣ್ಣ ಅವರ ಮಾತಿನ ಮಧ್ಯೆ ಪ್ರವೇಶ ಮಾಡಿದ ಹಾಸನ ಶಾಸಕ ಪ್ರೀತಮ್ ಗೌಡ, ಅವರ ಆಕ್ರೋಶವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ರು.
ಜಿಲ್ಲಾಧಿಕಾರಿಗಳು ಸರ್ಕಾರ ಹೇಳಿದಂತೆ ಕೆಲಸ ಮಾಡುತ್ತಾರೆ. ನಿಮಗೆ ಎಷ್ಟು ದುಡ್ಡು ಬೇಕಾದ್ರು ಸರ್ಕಾರ ಕೊಡುತ್ತಾರೆ. ನಾವು ಕೂಡ ನಿಮಗೆ ಸಾಥ್ ಕೊಡುತ್ತೇವೆ. ಎಲ್ಲದಕ್ಕೂ ಡಿಸಿ ಹೊಣೆಗಾರಿಕೆ ಮಾಡುವುದು ಸರಿಯಲ್ಲ ಎಂದರು.
ಬಳಿಕ ಸಭೆಯಿಂದ ಹೊರ ನಡೆಯುತ್ತಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣನನ್ನ ಶಾಸಕ ಪ್ರೀತಮ್ ಗೌಡ ಮನವೊಲಿಸಿ ವಾಪಸ್ ಅವರ ಸ್ಥಳಕ್ಕೆ ಕರೆದೊಯ್ದು ಸಭೆಯ ಗದ್ದಲವನ್ನು ತಿಳಿಗೊಳಿಸಿದರು.