ಹಾಸನ: ರಾಜ್ಯದಲ್ಲಿ ಎರಡು ಉಪ ಚುನಾವಣೆ ಮುಗಿದ ಬಳಿಕ ಕೆಇಬಿ ಬಿಲ್ ಹೆಚ್ಚು ಮಾಡಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದ 5 ಕೆಇಬಿ ಕಂಪನಿಗಳಿಂದ 7,996 ಕೋಟಿ ನಷ್ಟವಾಗಿದೆ ಎಂದು ಕೆಆರ್ಸಿ ಕಂಪನಿಗಳು ಅರ್ಜಿ ಹಾಕಿವೆ. ಈ ಕಂಪನಿಗಳು ಈ ಹಣ ಭರಿಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿವೆ. ಹಾಗಾಗಿ ಸರ್ಕಾರ ಒಪ್ಪಿದೆ ಎಂದರು. ಈ ನಷ್ಟ ಸರಿದೂಗಿಸಲು ನಮ್ಮ ರೈತರನ್ನ ಸಂಕಷ್ಟಕ್ಕೆ ದೂಡಲಾಗಿದೆ. ಪ್ರತಿ ಯೂನಿಟ್ಗೆ 40 ಪೈಸೆ ಹೆಚ್ಚು ಮಾಡಿದ್ದಾರೆ. ರಾಜ್ಯದ ಇಂಧನ ಇಲಾಖೆಯಲ್ಲಿ ಇದೊಂದು ದುರದೃಷ್ಟಕರ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು. ಇದ್ರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತದೆ. ನಾನು ಇಂಧನ ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ 600 ಕೋಟಿ ಹಣ ಎಫ್ಡಿ ಇಟ್ಟಿದ್ದೆ. ರೈತರಿಗೆ ಒಂದೊಂದು ವಿದ್ಯುತ್ ಟಿಸಿ ಹಾಕಲು 18 ಸಾವಿರ ರೂ. ಜೊತೆಗೆ ಲಂಚ ಸೇರಿ 40 ಸಾವಿರ ಹಣ ತಗೊಳ್ತಿದ್ದಾರೆ ಎಂದು ಆರೋಪಿಸಿದರು. ಕೆಇಬಿ ಕಂಟ್ರಾಕ್ಟರ್ಗಳ ಬಾಕಿ ಬಿಲ್ ಎರಡರಿಂದ ಮೂರು ಸಾವಿರ ಇದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮಂಗಳೂರು ಏರ್ಪೋರ್ಟ್ಅನ್ನು ಅಂಬಾನಿ ಕಂಪನಿಗೆ ಕೊಡಲಾಗಿದೆ. ಈ ಕೆಇಬಿಯನ್ನ ಯಾವ ಕಂಪನಿಗೆ ಮಾರಾಟ ಮಾಡ್ತಾರೋ ಗೊತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. 48 ಸಾವಿರ ಕುಟುಂಬಕ್ಕೆ ವೃದ್ಧಾಪ್ಯ ವೇತನ ಬಂದಿಲ್ಲ: ಈ ಸರ್ಕಾರ ಲೂಟಿಕೋರರ ಸರ್ಕಾರವಾಗಿದೆ. ಕೆಲ ಗುತ್ತಿಗೆದಾರರು ತಮ್ಮ ಪತ್ನಿಯರ ತಾಳಿ ಮಾರಾಟ ಮಾಡ್ತಿದ್ದಾರೆ. ಪ್ರಧಾನಿ ಮೋದಿಯವರೇ ನಮ್ಮದು 10 ಪರ್ಸೆಂಟ್ ಸರ್ಕಾರ ಅಂತಾ ಹೇಳ್ತಿದ್ರು. ಆದರೆ ಈಗ ರಾಜ್ಯದಲ್ಲಿರುವ ನಿಮ್ಮದು ಯಾವ ಸರ್ಕಾರ ಹೇಳಿ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.