ಹಾಸನ: ತಮ್ಮ ಕೆಲಸ ಮಾಡಿ ಕೊಡಿ ಎಂದು ಯಾರೆ ಸಾಮಾನ್ಯ ಜನ ನಿಮ್ಮ ಬಳಿ ಬಂದಾಗ ಸ್ಪಂದಿಸಿ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಆರೋಗ್ಯವಿಲ್ಲದಿದ್ದರೇ ಎಷ್ಟೆ ಆಸ್ತಿ ಇದ್ದರೂ ಉಪಯೋಗಕ್ಕೆ ಬರುವುದಿಲ್ಲ. ಪ್ರತಿದಿನ ಕೆಲ ಸಮಯ ಆಟೋಟಕ್ಕೆ ಮತ್ತು ಯೋಗಕ್ಕೆ ಮೀಸಲಿಟ್ಟರೆ ಆ ದಿನ ಉತ್ಸಾಹದಿಂದ ಕೆಲಸ ಮಾಡಬಹುದು ಎಂದರು.
ಶ್ರೀಮಂತರು,ಬಡವರು ಬಂದರೆ ಇಬ್ಬರನ್ನು ಒಂದೆ ರೀತಿ ಗೌರವಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಇನ್ನು ಹೊಸ ಪಿಂಚಣಿ ಯೋಜನೆ ನೌಕರರಿಗೆ ದುಷ್ಪಾರಿಣಾಮ ಬೀರಲಿದ್ದು, ನಿಮ್ಮ ಬೇಡಿಕೆ ಏನಿದೆ ತಿಳಿಸಿ. ಮುಂದೆ ನಡೆಯುವ ಸದನದ ಸಭೆಯಲ್ಲಿ ಈ ಬಗ್ಗೆ ಗಮನಸೆಳೆದು ಬಗೆಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು. ಅದಕ್ಕಿಂತ ಮುಖ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಪ್ರೀತಮ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.