ಹಾಸನ: ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನದ ಹಣ ನೀಡಲು ಅಂಚೆ ವಿತರಕನೋರ್ವ ಲಂಚ ಪಡೆಯುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಅಟ್ಟಾವರ ಹೊಸಹಳ್ಳಿ ಗ್ರಾಮದಲ್ಲಿ ವೃದ್ಧರಿಗೆ ಹಣ ನೀಡಲು ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಯಾರಿಗೂ ಹಣವನ್ನು ಕೊಡುವುದಿಲ್ಲ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಯುವಕರು ತಮ್ಮ ಮೊಬೈಲ್ನಲ್ಲಿ ಹಣ ಪಡೆಯುವುದನ್ನ ಚಿತ್ರೀಕರಿಸಿದ್ದಾರೆ. ದುದ್ದ ಅಂಚೆ ಕಚೇರಿಯ ಕುಮಾರ್ ಎಂಬುವ ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಪ್ರತೀ ತಿಂಗಳು ವಿಕಲಚೇತನರ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ನೀಡಲು ದುದ್ದ ಅಂಚೆ ಕಚೇರಿಯಿಂದ ಅಟ್ಟಾವರ ಹೊಸಳ್ಳಿ ಗ್ರಾಮಕ್ಕೆ ಹೋಗುವ ಈತನಿಗೆ 20, 30, ಅಥವಾ 50 ರೂ. ಹಣ ಸಂದಾಯ ಮಾಡಬೇಕಂತೆ. ಇಲ್ಲದಿದ್ದರೆ ದಾಖಲಾತಿ ಮತ್ತಿತರ ಕಾರಣ ಹೇಳಿ ಹಣವನ್ನು ಕೊಡುವುದಕ್ಕೆ ತಡ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ದುದ್ದ ಅಂಚೆ ಕಚೇರಿಯ ವಿತರಕ ನಾನು ಯಾರ ಬಳಿ ಕೂಡ ಹಣವನ್ನು ಪಡೆದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಣ ಸಂದಾಯ ಮಾಡಬೇಕು. ಇಂತಹ ಸಮಯದಲ್ಲಿ ಚಿಲ್ಲರೆಯ ಸಮಸ್ಯೆ ಉಂಟಾದಾಗ ಚಿಲ್ಲರೆ ಕೊಟ್ಟು ಅವರಿಗೆ ಬರಬೇಕಾದ ಹಣವನ್ನು ಪಡೆದುಕೊಳ್ಳುತ್ತಾರೆ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ ಎಂದಿದ್ದಾರೆ.