ಹಾಸನ (ಅರಸೀಕೆರೆ): ಪತ್ನಿ ಬದಲಾಗಿ ಸಭೆಗೆ ಬಂದಿದ್ದಲ್ಲದೇ ತಮ್ಮ ಮೇಲೆ ದಬ್ಬಾಳಿಕೆ ಮಾಡಿದ ನಗರಸಭೆಯ ಮಹಿಳಾ ಸದಸ್ಯರ ಪತಿಯಂದಿರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಒತ್ತಾಯಿಸಿದ್ದಾರೆ.

ನಗರಸಭೆ ಕಚೇರಿಯಲ್ಲಿ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಇಂದು ನಗರೋತ್ಥಾನ ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಸಭೆ ಕರೆಯಲಾಗಿತ್ತು. ನಗರಸಭೆಯ ಮಹಿಳಾ ಸದಸ್ಯರು ಸಭೆಗೆ ಹಾಜರಾಗಬೇಕಿತ್ತು. ಆದರೆ, ಅವರ ಬದಲಾಗಿ ಅವರವರ ಗಂಡಂದಿರು ಸಭೆಗೆ ಹಾಜರಾಗಿದ್ದರು. ಅಷ್ಟೇ ಅಲ್ಲದೇ ಕಚೇರಿಯ ಬಾಗಿಲು ಹಾಕಿಕೊಂಡು ಗೌಪ್ಯವಾಗಿ ಸಭೆ ನಡೆಸುತ್ತಿದ್ದರು ಎನ್ನಲಾಗಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಬಿಜೆಪಿಯ ನಗರ ಮಂಡಲ ಕಾರ್ಯದರ್ಶಿ ರಾಘವೇಂದ್ರ ಸಭೆಗೆ ಹಾಜರಾಗಿ ಸಭೆಯ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಲು ಮುಂದಾಗಿದ್ದರು. ಈ ವೇಳೆ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ, ನೀನು ಚುನಾಯಿತ ಪ್ರತಿನಿಧಿಯೇ? ಇಲ್ಲಿಗ್ಯಾಕೆ ಬಂದಿದ್ದೀಯಾ? ಹೊರಗಡೆ ಹೋಗು ಎಂದು ಅವಮಾನಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಸಭೆ ಬಳಿಕ ಆಯುಕ್ತರ ಮುಂದೆ ಅನಾವಶ್ಯಕವಾಗಿ ಸಾಮಾಜಿಕ ಕಾರ್ಯಕರ್ತ ಸಭೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಮತ್ತು ಇತರ ಮಹಿಳಾ ಸದಸ್ಯರುಗಳ ಪತಿಯಂದಿರು ದೂರು ನೀಡಲು ಮುಂದಾದರು. ಇವರ ಮಾತು ಕೇಳುತ್ತಿದ್ದಂತೆ ಆಯುಕ್ತರ ಮುಂದೆ ಬಂದ ರಾಘವೇಂದ್ರ, ಈ ಬಗ್ಗೆ ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಸದಸ್ಯರುಗಳು ಗಲಟೆ ಮಾಡುತ್ತಲೇ ಏಕಾಏಕಿ ಈತನ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ, ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಘವೇಂದ್ರನನ್ನು ಹೊರಗಡೆ ಕರೆತಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಬಳಿಕ ಮಾತನಾಡಿದ ರಾಘವೇಂದ್ರ, ಸಾರ್ವಜನಿಕರಿಗಾಗಿ ಮುಕ್ತವಾಗಿ ನಡೆಸಬೇಕಾದ ಸಭೆಯನ್ನು ಕಾನೂನು ಬಾಹಿರವಾಗಿ ನಡೆಸಿದ್ದಾರೆ. ಈ ಮೂಲಕ ಕಲಂ 49 ಪ್ರಕಾರ ಲೋಪ ಎಸಗಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.