ಗದಗ: ಕಪ್ಪತ್ತಗುಡ್ಡ ವನ್ಯಜೀವಿಧಾನದ ಸ್ಥಾನಮಾನ ತೆಗೆಯಬೇಕೆಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿರುವುದು ಈಗ ಜಿಲ್ಲೆಯ ಜನರಲ್ಲಿ ಅನುಮಾನ ಮೂಡಿಸಿದೆ.
ಹಲವು ಪ್ರಾಮುಖ್ಯತೆ ಪಡೆದಿರೋ ಗದಗ ಜಿಲ್ಲೆಯ ಕಪ್ಪತ್ತಗುಡ್ಡ, ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿ ಶಿಖರವಿದ್ದಂತೆ. ಈ ಸಂಜೀವಿನಿಯನ್ನು ಉಳಿಸಿಕೊಳ್ಳಲು ಈ ಭಾಗದ ಪರಿಸರ ಪ್ರೇಮಿಗಳು ಹೋರಾಟ ಮಾಡಿದ ಫಲವಾಗಿ ಕಪ್ಪತ್ತಗುಡ್ಡಕ್ಕೆ ಸರ್ಕಾರ ವನ್ಯಜೀವಿಧಾಮ ಸ್ಥಾನ ನೀಡಿದೆ.
ಕಪ್ಪತ್ತಗುಡ್ಡದ ಸರಹದ್ದಿನಲ್ಲಿಯೂ ಸಹ ತನ್ನ ಕ್ಷೇತ್ರ ಹೊಂದಿರೋ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ, ಕಪ್ಪತ್ತಗುಡ್ಡಕ್ಕೆ ವನ್ಯಜೀವಿಧಾಮ ಸ್ಥಾನ ನೀಡಿರೋದನ್ನು ವಿರೋಧಿಸಿದ್ದಾರೆ. ಜಿಲ್ಲೆಯ ಡಂಬಳ ಗ್ರಾಮದ ಶಾಲೆಯ ನೂತನ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಕಪ್ಪತ್ತಗುಡ್ಡದ ವನ್ಯಜೀವಿಧಾಮ ಸ್ಥಾನವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಯಾವುದೇ ಹುಲಿ, ಸಿಂಹಗಳು ವಾಸವಾಗಿಲ್ಲ. ದನಕರುಗಳನ್ನು ಮೇಯಿಸಲು ಹೋದ್ರೆ ಅವರ ಮೇಲೆಯೇ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಾರೆ. ಹೀಗಾಗಿ ರೈತರಿಗೆ ಇಲ್ಲಿ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆ ಎಂದು ಭಾಷಣ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳಕಪ್ಪ ಬಂಡಿ ಅವರ ಈ ಹೇಳಿಕೆಗೆ ಈಗ ಗದಗ ಜಿಲ್ಲೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ ಸ್ಥಾನಮಾನ ಹಾಗೇ ಇರಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಈ ಬಗೆಯ ವಿಷಯಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರೆ ಮತ್ತೊಂದು ಹೋರಾಟ ಮಾಡಬೇಕಾಗುತ್ತೆ ಎಂದು ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.