ಗದಗ : ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಗದಗ ಜಿಲ್ಲೆ ಶಿರಹಟ್ಟಿ ತಾಲ್ಕೂಕಿನ ಸುಗುನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಅವರು ಭರವಸೆ ನೀಡಿದ್ದು, ಕೊಟ್ಟ ಭರವಸೆಗಳೆಲ್ಲಾ ಈಡೇರಿದೆಯೇ? ಎನ್ನುವುದನ್ನು ತಿಳಿದುಕೊಳ್ಳಲು ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೋನರೆಡ್ಡಿ ಸುಗುನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ಬಾರಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸುಗುನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ರು. ಆ ಸಂದರ್ಭದಲ್ಲಿ ಆಲದಮ್ಮನ ಕೆರೆಗೆ ನೀರು ತುಂಬಿಸುವುದು, ಇಂಗು ಕೆರೆಯ ಅಭಿವೃದ್ಧಿ, ಗ್ರಾಮದಲ್ಲಿ ಸಿಸಿ ರಸ್ತೆ, ಬೇರೆ ಹಳ್ಳಿಗಳಿಗೆ ತೆರಳಲು ಡಾಂಬರ್ ರಸ್ತೆಗಳು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ ಗ್ರಾಮಸ್ಥರಿಗೆ ಸಿಎಂ ಅಭಯ ನೀಡಿದ್ದರು. ಈ ಎಲ್ಲಾ ಭರವಸೆಗಳ ಮಧ್ಯೆ ಕುಡಿಯುವ ನೀರಿಗೆ ತಾತ್ಕಾಲಿಕ ಭರವಸೆ ದೊರೆತ್ರೂ ಕೂಡ, ಶಾಶ್ವತ ಪರಿಹಾರ ಸಿಗಲೇ ಇಲ್ಲ ಎಂದು ಜನರ ಅಳಲಾಗಿತ್ತು.
ಇದೀಗ ಮತ್ತೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಾದ ವಿಚಾರದ ಬಗ್ಗೆ ಸುಗುನಹಳ್ಳಿ ಗ್ರಾಮಸ್ಥರು ಅಪಸ್ವರ ಎತ್ತುತ್ತಿದ್ದಂತೆ ಹಿಂದಿನ ವಾಸ್ತವ್ಯದ ಬಗ್ಗೆ ವಾಸ್ತವ ಏನಿದೆ? ಎನ್ನುವುದನ್ನು ತಿಳಿಯೋಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೋನರೆಡ್ಡಿ ಗದಗ ಜಿಲ್ಲಾಧಿಕಾರಿಗಳೊಡನೆ ಸುಗುನಹಳ್ಳಿಗೆ ಭೇಟಿ ನೀಡಿದ್ರು. ಈ ವೇಳೆ ಗ್ರಾಮಕ್ಕೆ ಅವಶ್ಯಕ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ರು.
ಕೋನರೆಡ್ಡಿ ಹಾಗೂ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಳೆದ ಬಾರಿಯ ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಿದ ಗ್ರಾಮಸ್ಥರು, ಕೆಲ ಭರವಸೆಗಳು ಇಂದಿಗೂ ಈಡೇರಿಲ್ಲ. ಅಲ್ಲದೇ ಶಾಶ್ವತ ಕುಡಿಯುವ ನೀರಿನ ಪರಿಹಾರ ಮಾಡಿಸಿಕೊಡಿ ಅಂತ ಬೇಡಿಕೆಯಿಟ್ಟರೆ, ಇನ್ನೂ ಕೆಲವರು ಈಗಾಗಲೇ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಖುಷಿ ವ್ಯಕ್ತಪಡಿಸಿ ಬೇಕಿರುವ ಸೌಲಭ್ಯಗಳಿಗಾಗಿ ಆಗ್ರಹಿಸಿದರು.