ಹುಬ್ಬಳ್ಳಿ: ಸುಪ್ರೀಂ ಕೋರ್ಟ್, ಮಹದಾಯಿ ಕಳಸಾ ಬಂಡೂರಿ ವಿಚಾರವಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನಿನ ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದ್ದು ಇದನ್ನು ಉತ್ತರ ಕರ್ನಾಟಕ ಭಾಗದ ಜನರು ಸ್ವಾಗಸುತ್ತೇವೆ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಮುಖಂಡ ಸಿದ್ದಣ್ಣ ತೇಜಿ ಹೇಳಿದ್ರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಮಹದಾಯಿ ಕಳಸಾ ಬಂಡೂರಿ ಯೋಜನೆಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದ್ದು, ಹೋರಾಟದ ಫಲವಾಗಿ 13.5 ಟಿಎಂಸಿ ನೀರು ಬಂದಿತ್ತು. ಅದನ್ನು ಸ್ವಾಗತಿಸಿ ಹೆಚ್ಚಿನ ನೀರಿನ ಬೇಡಿಕೆ ಹಿನ್ನಲೆಯಲ್ಲಿ ರಾಜ್ಯದಿಂದ ಮೇಲ್ಮನವಿ ಸಲ್ಲಿಸಲಾಗಿತ್ತು. ಆ ಸಮಯದಲ್ಲಿಯೇ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದರೇ ಇದೀಗ ಉತ್ತರ ಕರ್ನಾಟಕದಲ್ಲಿ ಬಹುತೇಕ ಭಾಗದ ಕುಡಿಯುವ ನೀರಿನ ಕೊರತೆ ಬಗೆಹರಿಯುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಹಾಗೇ ಮಾಡಲಿಲ್ಲ ಎಂದರು.
ಈ ಬಗ್ಗೆ ಸಾಕಷ್ಟು ಬಾರಿ ಪ್ರಧಾನಿ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಪತ್ರದ ಮೂಲಕ ಗೆಜೆಟ್ ಹೊರಡಿಸುವಂತೆ ಮನವಿ ಮಾಡಿದರೂ ಕೂಡಾ ಅವರು ಕಾನೂನು ತೊಡಕುಗಳಿವೆ ಎಂದು ಹೇಳುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್ ಮಹದಾಯಿ ವಿಚಾರವಾಗಿ ನ್ಯಾಯಾಧೀಕರಣದಂತೆ ನೀಡಲಾದ 13.5 ಟಿಎಂಸಿ ನೀರಿನ ಕುರಿತು ನೇರವಾಗಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಲು ಯಾವುದೇ ಕಾನೂನಿನಲ್ಲಿ ಅಡೆತಡೆಗಳಿಲ್ಲ ಎಂದು ತಿಳಿಸಿದೆ. ಇದನ್ನು ಮಹದಾಯಿ ಅಚ್ಚುಕಟ್ಟಿನ ಜನರು ಸ್ವಾಗತಿಸುತ್ತೇವೆ. ಮಹದಾಯಿ ಕಳಸಾ ಬಂಡೂರಿ ಕುರಿತು ಪ್ರಧಾನಮಂತ್ರಿ ಅವರು, ಮೂರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಮಹದಾಯಿ ಕುರಿತು ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಸಿದ್ದಣ್ಣ ತೇಜಿ ಹೇಳಿದರು.